ಇಸ್ಲಾಮಾಬಾದ್ (ಪಿಟಿಐ): ಕರಾಚಿಯ ಸೋಲ್ಜರ್ ಬಜಾರ್ನಲ್ಲಿರುವ 1500 ವರ್ಷಗಳಷ್ಟು ಹಳೆಯ ಹಿಂದೂ ದೇಗುಲವೊಂದನ್ನು ಈಗ ಜೀರ್ಣೋದ್ಧಾರಗೊಳಿಸಲಾಗುತ್ತಿದೆ.
ಇತ್ತೀಚೆಗೆ ಕಾನೂನು ಸಮರದ ಮೂಲಕ ದೇವಾಲಯದ ಜಮೀನನ್ನು ಭೂಗಳ್ಳರ ತೆಕ್ಕೆಯಿಂದ ಮುಕ್ತಗೊಳಿಸಿದ ನಂತರ ಈ ಪಂಚಮುಖಿ ಆಂಜನೇಯ ಮಂದಿರದ ಜೀರ್ಣೋದ್ಧಾರ ಕಾರ್ಯ ಆರಂಭಗೊಂಡಿದೆ.
ಭೂಗಳ್ಳರ ಬೆದರಿಕೆ, ಹಣಕಾಸಿನ ಮುಗ್ಗಟ್ಟಿನ ನಡುವೆಯೂ ಆಡಳಿತ ಮಂಡಳಿ ಈಗ ದೇವಾಲಯದ ಕೆಲಸವನ್ನು ಪೂರ್ಣಗೊಳಿಸಲು ಮುಂದಾಗಿದೆ ಎಂದು ಸ್ಥಳೀಯ ಪತ್ರಿಕೆ `ಟ್ರಿಬ್ಯೂನ್~ ವರದಿ ಮಾಡಿದೆ.
`ಎಂಟು ಅಡಿ ಎತ್ತರದ ನೀಲಿ ಮತ್ತು ಬಿಳಿ ಬಣ್ಣದಿಂದ ಕೂಡಿದ ಹನುಮನ ಪ್ರತಿಮೆಯಿರುವ ಈ ದೇವಾಲಯವನ್ನು ಬಹಳ ಹಿಂದೆಯೇ ಪತ್ತೆ ಹಚ್ಚಲಾಗಿತ್ತು. ಪ್ರಸ್ತುತ ಜೀರ್ಣೋದ್ಧಾರ ಕಾರ್ಯ ನಡೆಯುವ ಸಂದರ್ಭದಲ್ಲಿ ಮೂಲ ಮೂರ್ತಿಗೆ ಯಾವುದೇ ತೊಂದರೆಯಾಗದಂತೆ ರಕ್ಷಿಸಲಾಗುತ್ತದೆ.
ಪ್ರಸ್ತುತ ಉಚಿತ ದಾಸೋಹ ಕೊಠಡಿ ಹಾಗೂ ಪ್ರಾರ್ಥನಾ ಮಂದಿರವನ್ನು ನಿರ್ಮಿಸಲಾಗಿದೆ. ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ~ ಎಂದು ದೇವಾಲಯದ ಉಸ್ತುವಾರಿ ಹೊತ್ತಿರುವ ರಾಮ್ನಾಥ್ ಮಹಾರಾಜ್ ಹೇಳುತ್ತಾರೆ.
`ಕಾಮಗಾರಿಗೆ ಒಟ್ಟು 45ಲಕ್ಷ ರೂಪಾಯಿ ಹಣ ಅಗತ್ಯವಿದ್ದು, ಈಗಾಗಲೇ ಅರ್ಧದಷ್ಟು ಹಣ ಸಂಗ್ರಹವಾಗಿದೆ. ಉಳಿದ ಹಣವನ್ನು ಭಕ್ತರಿಂದ ವಂತಿಕೆ ಮೂಲಕ ಸಂಗ್ರಹಿಸುತ್ತಿದ್ದೇವೆ~ ಎನ್ನುತ್ತಾರೆ ರಾಮನಾಥ್.