ಬೇಲೂರು: ಮಹಾಕವಿ ರಾಘವಾಂಕನ ಸಮಾಧಿ ಸ್ಥಳ ಎನ್ನಲಾಗಿರುವ ಪಟ್ಟಣದ ಕೆಂಪೇಗೌಡ ರಸ್ತೆಯಲ್ಲಿರುವ ಪ್ರಾಚೀನ ಪಾತಾಳೇಶ್ವರ ದೇವಾಲಯದಲ್ಲಿ ಭಾನುವಾರ ಸಂಜೆ ಶಿವಲಿಂಗದ ತಳಭಾಗವನ್ನು ಶೋಧಿಸಲಾಯಿತು. ಆದರೆ ಸಮಾಧಿಯ ಯಾವ ಕುರುಹೂ ಪತ್ತೆಯಾಗಲಿಲ್ಲ.
ಪಾತಾಳೇಶ್ವರ ದೇವಾಲಯದ ಪುನರ್ ನಿರ್ಮಾಣಕ್ಕಾಗಿ ಪಾತಾಳೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ದೇಗುಲದ ಪುನ ರ್ನಿರ್ಮಾಣ ಕೆಲಸವನ್ನು ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ವಹಿಸಿಕೊಂಡಿದೆ.
ಕಳಾಕರ್ಷಣೆಯ ನಂತರ ಶನಿವಾರ ಶಿವಲಿಂಗವನ್ನು ಹೊರತೆಗೆಯಲಾಗಿದ್ದು, ಲಿಂಗವು ನಾಲ್ಕು ಅಡಿ ಉದ್ದ ಇರುವುದು ಕಂಡು ಬಂತು. ಇಂಥ ನೀಳವಾದ ಲಿಂಗಗಳು ತುಂಬ ಅಪರೂಪ, ಅದರಲ್ಲೂ ಹೊಯ್ಸಳರ ನಿರ್ಮಾಣ ಗಳಲ್ಲಿ ಇಂತಹ ವಿನ್ಯಾಸಗಳು ವಿರಳ ಎನ್ನಲಾಗಿದೆ.
ಶನಿವಾರ ಅಧಿಷ್ಠಾನ ಶಿಲೆಯವರೆಗೂ ಶೋಧ ನಡೆಸಲಾಗಿತ್ತು. ಅನೇಕ ಸಂಶೋಧಕರು ಮತ್ತು ಇತಿಹಾಸ ಕಾರರು ಪಾತಾಳೇಶ್ವರ ದೇವಾಲಯವೇ ರಾಘವಾಂಕನ ಸಮಾಧಿ ಎಂಬ ಊಹೆ ವ್ಯಕ್ತಪಡಿಸಿದ್ದರಾದರೂ ಖಚಿತವಾಗಿ ಹೇಳಿರಲಿಲ್ಲ.
ಭಾನುವಾರ ಮಧ್ಯಾಹ್ನದ ನಂತರ ಶಿವಲಿಂಗದ ತಳಭಾಗದಲ್ಲಿ ಶೋಧ ಕಾರ್ಯ ಮುಂದುವರೆಸಿ ಸುಮಾರು ಎರಡು ಅಡಿ ಅಗಲ, ಎರಡು ಅಡಿ ಉದ್ದ ಹಾಗೂ ಒಂದು ಅಡಿ ದಪ್ಪದ ಅಧಿಷ್ಠಾನ ಶಿಲೆಯನ್ನು ಮೇಲೆತ್ತಿ ನಿಲ್ಲಿಸಲು ಭಾರಿ ಪ್ರಯಾಸ ಪಡಬೇಕಾಯಿತು.
ಬಳಿಕ ಜೀರ್ಣೋದ್ಧಾರ ಸಮಿತಿ ಸದಸ್ಯರು ಮತ್ತು ಸ್ಥಳೀಯರು ಅಧಿಷ್ಠಾನ ಶಿಲೆಯ ಕೆಳಭಾಗ ಸುಮಾರು ಎರಡು ಅಡಿಯಷ್ಟು ಮಣ್ಣು ಮತ್ತು ದುಂಡು ಕಲ್ಲುಗಳನ್ನು ಹೊರ ತೆಗೆದ ಸಂದರ್ಭ ದಲ್ಲೂ ಸಮಾಧಿಯ ಯಾವ ಲಕ್ಷಣಗಳು ಪತ್ತೆಯಾಗಲಿಲ್ಲ.
ಪುನರ್ನಿರ್ಮಾಣ ಕಾರ್ಯಕ್ಕಾಗಿ ದೇವಾಲಯವನ್ನು ಸಂಪೂರ್ಣ ಬಿಚ್ಚಿ ತಳಪಾಯದಲ್ಲಿಯ ದುಂಡು ಕಲ್ಲುಗಳನ್ನು ಹೊರತೆಗೆದು ಗಟ್ಟಿ ಮಣ್ಣು ಸಿಗುವವರೆಗೂ ಶೋಧ ನಡೆಸಬೇಕಾಗಿದೆ.
ಇದಾದ ಬಳಿಕವಷ್ಟೇ ಸಮಾಧಿ ಇದೇ ಯೇ, ಇಲ್ಲವೇ ಎಂಬ ಬಗ್ಗೆ ಖಚಿತವಾಗಿ ಹೇಳ ಲು ಸಾಧ್ಯ ಎಂದು ಲೇಖಕ ಹಾಗೂ ಸಂಶೋಧಕ ಡಾ. ಶ್ರೀವತ್ಸ ಎಸ್. ವಟಿ `ಪ್ರಜಾವಾಣಿ' ಗೆ ತಿಳಿಸಿದರು.
ಶೋಧ ಸಂದರ್ಭದಲ್ಲಿ ಜೀರ್ಣೋ ದ್ಧಾರ ಸಮಿತಿ ಅಧ್ಯಕ್ಷ ಎಚ್.ಎಂ. ದಯಾನಂದ್, ಪದಾಧಿಕಾರಿಗಳಾದ ಬಾಳೆಹಣ್ಣಿನ ರಮೇಶ್, ಬಿ.ಆರ್.ವೆಂಕಟೇಗೌಡ, ಯಲ್ಲೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.