ಹರಿಹರ: ಮತಗಟ್ಟೆ ಅಧಿಕಾರಿಗಳ ಪಾರದರ್ಶಕ ಹಾಗೂ ನಿಷ್ಪಕ್ಷಪಾತ ಕಾರ್ಯ ನಿರ್ವಹಣೆಯು ಚುನಾವಣೆ ವ್ಯವಸ್ಥೆಯ ಮೌಲ್ಯವರ್ಧನೆ ಕಾರಣವಾಗುತ್ತದೆ ಎಂದು ಹರಿಹರ ವಿಧಾನಸಭೆ ಕ್ಷೇತ್ರದ ಚುನಾವಣಾ ವೀಕ್ಷಕ ನಾಗೀರೆಡ್ಡಿ ಮತಗಟ್ಟೆ ಅಧಿಕಾರಿಗಳ ಕರ್ತವ್ಯದ ಮಹತ್ವ ತಿಳಿಸಿದರು.
ನಗರದ ಮರಿಯಾ ಸದನದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ನಡೆದ ಮತಗಟ್ಟೆ ಅಧಿಕಾರಿಗಳ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
ಮೊಬೈಲ್ ಬಳಸಬೇಡಿ
ಪ್ರಸ್ತುತ ಚುನಾವಣೆಗಳಲ್ಲಿ ಮತಗಟ್ಟೆಗಳಲ್ಲಿ ಪರವಾನಗಿ ಇಲ್ಲದೇ ಯಾವುದೇ ವ್ಯಕ್ತಿಗಳಿಗೂ ಮತಗಟ್ಟೆಗಳಲ್ಲಿ ಪ್ರವೇಶಾವಕಾಶ ನೀಡಬಾರದು. ಮತಗಟ್ಟೆಯಲ್ಲಿ ಮೊಬೈಲ್ ಫೋನುಗಳನ್ನು ಬಳಸಬಾರದು. ಯಾವುದೇ ಸಮಸ್ಯೆಗಳಿದ್ದರೂ, ನೇರವಾಗಿ ಸೆಕ್ಟರ್ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹಾರ ಪಡೆಯಬಹುದು ಎಂದು ಸೂಚನೆ ನೀಡಿದರು.
ಮತಗಟ್ಟೆ ಅಧಿಕಾರಿಗಳಿಗೆ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಳಸುವ ಬಗ್ಗೆ ಪ್ರಾತ್ಯಕ್ಷಿಕೆ ಸಮೇತ ತರಬೇತಿ ನೀಡಲಾಯಿತು.
ಅಧಿಕಾರಿಗಳಿಗೆ ತರಬೇತಿ
ದಾವಣಗೆರೆಯ ಸರ್ಕಾರಿ ಕಾಲೇಜಿನ ಉಪಾನ್ಯಾಸಕ ದಾದಾಪೀರ್ ನವಿಲಿಹಾಲ್, ಶಿಕ್ಷಣ ಇಲಾಖೆಯ ದೊಡ್ಡಗೌಡ್ರು ಹಾಗೂ ಜಿಲ್ಲಾ ಪಂಚಾಯತ್ ಸಹಾಯಕ ಎಂಜಿನಿಯರ್ ನೌಷದ್ ಅಲಿ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಿದರು.
ಚುನಾವಣಾ ವೆಚ್ಚ ಪರಿವೀಕ್ಷಕ ರಾಜುರಂಜನ್, ಚುನಾವಣಾ ಅಧಿಕಾರಿ ವಿ. ನಾಗರಾಜ, ಉಪ ಚುನಾವಣಾ ಅಧಿಕಾರಿ ತಹಶೀಲ್ದಾರ್ ಜಿ. ನಜ್ಮಾ ಉಪಸ್ಥಿತರಿದ್ದರು.