ಬೆಳಗಾವಿ: ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿ ಕಚೇರಿಯೊಳಗೆ ಪ್ರವೇಶಿಸಲು ಅಭ್ಯರ್ಥಿ ಸೇರಿದಂತೆ ಐವರಿಗೆ ಅವಕಾಶವನ್ನು ಆಯೋಗ ಕಲ್ಪಿಸಿದೆ. ಆದರೆ, ಬೆಳಗಾವಿ ದಕ್ಷಿಣ ಹಾಗೂ ಉತ್ತರ ಕ್ಷೇತ್ರಗಳಿಗೆ ಎಂಇಎಸ್ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಆಗಮಿಸಿದಾಗ ಆಯೋಗದ ನಿಯಮ ಪಾಲನೆ ಆಗಲಿಲ್ಲ.
ಕಳೆದ ಮೂರು ದಿನಗಳಿಂದ ಅಭ್ಯರ್ಥಿ ಸೇರಿದಂತೆ ಐವರಿಗೆ ಮಾತ್ರ ಆವರಣದ ಒಳಗೆ ಪ್ರವೇಶಿಸಲು ಪೊಲೀಸರು ಸೂಚಿಸುವ ಮೂಲಕ, ಅವರ ಬೆಂಬಲಿಗರನ್ನು ಹೊರಗೆ ಹಾಕುತ್ತಿದ್ದರು. ಮಾಧ್ಯಮದವರಿಗೂ ಕಿರಿಕಿರಿ ಉಂಟು ಮಾಡಿದ್ದ ಪೊಲೀಸರು, ಬುಧವಾರ ಕಚೇರಿ ಆವರಣದೊಳಗೆ ಸುಮಾರು 20ಕ್ಕೂ ಹೆಚ್ಚು ಬೆಂಬಲಿಗರು ಆಗಮಿಸಿದರೂ ಮೂಕಪ್ರೇಕ್ಷಕರಂತೆ ವರ್ತಿಸಿದರು.
ಮಾಧ್ಯಮ ಪ್ರತಿನಿಧಿಗಳು ಈ ಬಗ್ಗೆ ಗಮನಸೆಳೆದ ನಂತರ ಎಂಇಎಸ್ ಅಭ್ಯರ್ಥಿಗಳ ಬೆಂಬಲಿಗರನ್ನು ಪೊಲೀಸರು ಹೊರಗೆ ಕಳುಹಿಸಿದ ಪ್ರಸಂಗ ಬುಧವಾರ ನಡೆಯಿತು.