ಪುಣೆ (ಪಿಟಿಐ): ಎನ್ಸಿಇಆರ್ಟಿ ಪಠ್ಯಪುಸ್ತಕದಲ್ಲಿ ಪ್ರಕಟವಾದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ವ್ಯಂಗ್ಯಚಿತ್ರ ವಿವಾದದ ಹಿನ್ನೆಲೆಯಲ್ಲಿ ಪ್ರೊ. ಸುಹಾಸ್ ಪಾಲಶಿಕರ್ ಅವರು ಪಠ್ಯಪುಸ್ತಕ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಪುಣೆ ವಿಶ್ವವಿದ್ಯಾಲಯದ ಆವರಣದಲ್ಲಿರುವ ಅವರ ಕಚೇರಿಯ ಮೇಲೆ ಶನಿವಾರ ಗುಂಪೊಂದು ದಾಳಿ ನಡೆಸಿ ಪೀಠೋಪಕರಣಗಳನ್ನು ಧ್ವಂಸ ಮಾಡಿದೆ.
ಈ ಸಂಬಂಧ ಪೊಲೀಸರು ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದು, ವಿವಾದದ ಬಗ್ಗೆ ಚರ್ಚಿಸಲು ಪಾಲಶಿಕರ್ ತಮ್ಮ ಕಚೇರಿಗೆ ಆಹ್ವಾನಿಸಿದ್ದ ಗುಂಪು ಈ ಕೃತ್ಯ ಎಸಗಿದೆ ಎಂದು ಹೇಳಿದ್ದಾರೆ. ವ್ಯಂಗ್ಯಚಿತ್ರ ದಲಿತರಿಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿರುವ ರಿಪಬ್ಲಿಕನ್ ಪ್ಯಾಂಥರ್ ಆಫ್ ಇಂಡಿಯಾ, ಘಟನೆಯ ಹೊಣೆ ಹೊತ್ತಿದೆ.
ಡಾ. ಅಂಬೇಡ್ಕರ್ ಅವರ ವ್ಯಂಗ್ಯಚಿತ್ರ ವಿವಾದ ಶುಕ್ರವಾರ ಲೋಕಸಭೆಯಲ್ಲಿ ಕೋಲಾಹಲ ಎಬ್ಬಿಸಿತ್ತು.
ಈ ಕುರಿತು ಕ್ಷಮೆ ಯಾಚಿಸಿದ್ದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್, ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಹಂಚದಂತೆ ಆದೇಶಿಸಿದ್ದರು. ಕಲಾವಿದ ಶಂಕರ್ ಅವರು ಬಹಳಷ್ಟು ಹಿಂದೆ ಬಿಡಿಸಿದ್ದ ಈ ವ್ಯಂಗ್ಯಚಿತ್ರವನ್ನು ತಮಿಳುನಾಡಿನ 11ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿ ಬಳಸಿಕೊಳ್ಳಲಾಗಿತ್ತು.