ಧಾರವಾಡ: ಸ್ಥಾಯಿ ಸಮಿತಿ ಅನುಮೋದನೆ ನೀಡಿದ್ದರೂ, ಕಟ್ಟಡ ಪರವಾನಗಿ ನೀಡದ ಹುಬ್ಬಳ್ಳಿ–ಧಾರವಾಡ ಮಹಾನಗರಪಾಲಿಕೆ ಕ್ರಮಕ್ಕೆ ಇಲ್ಲಿನ ಹೈಕೋರ್ಟ್ಪೀಠ ಗುರುವಾರ ತೀವ್ರ ಅತೃಪ್ತಿ ವ್ಯಕ್ತಪಡಿಸಿ, ನ್ಯಾಯಪೀಠದ ಮುಂದೆ ಹಾಜರಾಗಿದ್ದ ಪಾಲಿಕೆ ಜಂಟಿ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡಿತು.
ಸ್ಥಾಯಿ ಸಮಿತಿ ಪರವಾನಗಿ ನೀಡಲು ಅನುಮೋದನೆ ನೀಡಿ ಆರು ವರ್ಷಗಳು ಕಳೆದಿದ್ದರೂ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಲು ನಿಮಗಿರುವ ತೊಂದರೆಗಳೇನು? ನಿಮ್ಮ ಸ್ಥಾಯಿ ಸಮಿತಿ ನೀಡಿರುವ ಆದೇಶವನ್ನು ಪಾಲಿಸಿ ಎಂದು ನ್ಯಾಯಾಲಯ ಹೇಳುತ್ತಿದೆ. ಇದಕ್ಕೆ ನ್ಯಾಯಾಲಯದ ಮತ್ತೊಂದು ಆದೇಶದ ಅಗತ್ಯವಿಲ್ಲ. ಇದು ನಿಮ್ಮ ಅಧಿಕಾರಿಗಳು ಕೆಲಸ ಮಾಡುವ ರೀತಿಯನ್ನು ತೋರುತ್ತದೆ. ಆಯುಕ್ತರಿಗೆ ಸ್ಥಾಯಿ ಸಮಿತಿ ಆದೇಶವನ್ನು ತಿರಸ್ಕರಿಸಲು ಅಧಿಕಾರವಿದೆಯೇ ಎಂದು ನ್ಯಾಯಮೂರ್ತಿ ಅರವಿಂದಕುಮಾರ ಅವರಿದ್ದ ಏಕಸದಸ್ಯಪೀಠ ಪ್ರಶ್ನಿಸಿತು.
‘ನೀವು ಸಕಾರಾತ್ಮಕ ಕ್ರಮ ಕೈಗೊಳ್ಳದಿದ್ದರೆ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗುವಂತೆ ನಿರ್ದೇಶನ ನೀಡಬೇಕಾಗುತ್ತದೆ. ವಿಳಂಬಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕಾಗುತ್ತದೆ’ ಎಂದು ನ್ಯಾಯಪೀಠ ಒಂದು ಹಂತದಲ್ಲಿ ಎಚ್ಚರಿಕೆಯನ್ನೂ ನೀಡಿತು.
ಹುಬ್ಬಳ್ಳಿಯ ಉಣಕಲ್ನ ಕಾಳಿದಾಸನಗರದ ಬಡಾವಣೆಯಲ್ಲಿ ನಿವೇಶನ ಖರೀದಿಸಿದ್ದ ವಿನಾಯಕ ಕೃಷ್ಣರಾವ್ ಕುಲಕರ್ಣಿ ಎನ್ನುವವರು ಕಟ್ಟಡ ನಿರ್ಮಾಣ ಮಾಡಲು ಅನುಮತಿ ಕೋರಿ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ತಿರಸ್ಕೃತವಾಗಿತ್ತು. ಇದನ್ನು ಪ್ರಶ್ನಿಸಿ ಸ್ಥಾಯಿ ಸಮಿತಿಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಸಮಿತಿ 2008ರ ಜುಲೈ 16ರಂದು ಪರವಾನಗಿ ನೀಡಲು ಅನುಮೋದನೆ ನೀಡಿತ್ತು. ಅಲ್ಲದೇ, ಅದೇ ಬಡಾವಣೆಯ ಕೆಲ ನಿವೇಶನದಾರರು ಹೈಕೋರ್ಟ್ ಮೆಟ್ಟಿಲೇರಿ ಪರವಾನಗಿ ಪಡೆಯಲು ಆದೇಶ ಪಡೆದಿದ್ದರು.
ಹೀಗಾಗಿ ಕೃಷ್ಣರಾವ್ ಕುಲಕರ್ಣಿ ಸಮಿತಿ ಅನುಮೋದನೆ ಮತ್ತು ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ತಮ್ಮ ಅರ್ಜಿ ಪರಿಗಣಿಸಿ, ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಕೋರಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ಈ ಅರ್ಜಿಯೂ ತಿರಸ್ಕೃತಗೊಂಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ದಾಖಲಿಸಿದ್ದಾರೆ.
‘ಪಾಲಿಕೆ ಆಯುಕ್ತರು ರಜೆಯ ಮೇಲಿರುವುದರಿಂದ, ಮರಳಿದ ನಂತರ ಅವರೊಂದಿಗೆ ಚರ್ಚಿಸಿ, ಸಕಾರಾತ್ಮಕ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಪಾಲಿಕೆ ಪರ ವಕೀಲರು ನ್ಯಾಯಪೀಠಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಇದೇ 20ಕ್ಕೆ ಮುಂದೂಡಿತು.
ಅರ್ಜಿದಾರರ ಪರವಾಗಿ ಸೀಮಾ ಶಿವ ನಾಯಕ ಮತ್ತು ಪ್ರಮೋದ ಭಟ್ ವಕಾಲತ್ತು ವಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.