ದಾವಣಗೆರೆ: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಿವಿಧ ಆಸ್ತಿಗಳ ಖಾತೆ ವಿಚಾರದಲ್ಲಿ ಹಲವು ಅಕ್ರಮಗಳು ನಡೆದಿದ್ದು ಇದಕ್ಕೆ ಪಾಲಿಕೆಯ ಆಯುಕ್ತರೇ ನೇರ ಹೊಣೆಯಾಗುತ್ತಾರೆ ಎಂದು ನಗರಸಭೆ ಮಾಜಿ ಸದಸ್ಯ, ಜೆಡಿಎಸ್ ಮುಖಂಡ ನರೇಂದ್ರ ರಾವ್ ಪವಾರ್ ಆರೋಪಿಸಿದರು.
ಲ್ಯಾಂಡ್ ಡೆವಲಪರ್ಗಳು, ರಿಯಲ್ ಎಸ್ಟೇಟ್ ಏಜೆಂಟರು ಈಚೆಗೆ ಪಾಲಿಕೆಯ ವಿರುದ್ಧ ನಗರದಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನಿವೇಶನ ವ್ಯಾಪಾರಸ್ಥರು ಎಂದು ಹೇಳಿಕೊಳ್ಳುವ ಜನರು ಸೇರಿ, ಪಾಲಿಕೆಯ ಸಿಬ್ಬಂದಿ ನೆರವಿನಿಂದ ಖಾತಾ ರಿಜಿಸ್ಟರ್ನಲ್ಲಿ ನೇರವಾಗಿ ಹೊಲಗಳಿಗೆ ಡೋರ್ ನಂಬರ್ ಪಡೆದಿದ್ದಾರೆ. ಕೆಲವರು ಅಲಿನೇಷನ್ ಮಾಡಿಸಿ ಯಾವುದೇ ಪ್ಲಾನ್, ಅಭಿವೃದ್ಧಿಯಿಲ್ಲದೇ ಡೋರ್ ನಂಬರ್ ಪಡೆದಿದ್ದಾರೆ. ಮತ್ತೆ ಕೆಲವರು ಅಲಿನೇಷನ್ ಮಾಡಿಸಿ ಅಭಿವೃದ್ಧಿ ಶುಲ್ಕ ಪಾವತಿಸಿಲ್ಲ ಎಂದು ಅವರು ದೂರಿದರು.
ಇನ್ನೂ ಕೆಲವರು ತಾವೇ ನಕಲಿ ಖಾತೆಗಳನ್ನು ಸೃಷ್ಟಿಸಿ ನಿವೇಶನ ಮಾರಿ ಜನರಿಗೆ ವಂಚಿಸಿರುವುದು ಬಹಿರಂಗ ಆಗಿದೆ ಎಂದು ಆರೋಪಿಸಿದರು. ಇಂಥ ಬೆಳವಣಿಗೆಗಳಿಗೆ ಆಯುಕ್ತರು ಅವಕಾಶ ನೀಡದೇ ಅಗತ್ಯ ಕ್ರಮ ಕೈಗೊಳ್ಳಬೇಕಿತ್ತು. ಈಗಲಾದರೂ ಆಯುಕ್ತರು 2009ರ ಏ. 6ರಿಂದ ಪಾಲಿಕೆಗೆ ಬಂದಿರುವ ದಸ್ತಾವೇಜು ಪರಿಶೀಲಿಸಿ ಸೂಕ್ತಕ್ರಮ ಕೈಗೊಳ್ಳಬೇಕು. ಕೆಳ ಹಂತದ ಅಧಿಕಾರಿ, ಸಿಬ್ಬಂದಿ ತಪ್ಪು ಮಾಡಿದ್ದರೆ ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು