ನವದೆಹಲಿ (ಪಿಟಿಐ): ಉದ್ಯೋಗಿಗಳ ಭವಿಷ್ಯ ನಿಧಿ ಠೇವಣಿ ಮೇಲೆ ಶೇಕಡ 9.5ರಷ್ಟು ಬಡ್ಡಿ ನೀಡುವುದನ್ನು ಅನುಮೋದಿಸಿ ಅಧಿಕೃತವಾಗಿ ಪ್ರಕಟಿಸಲು ಹಣಕಾಸು ಸಚಿವಾಲಯ ವಿರೋಧ ವ್ಯಕ್ತಪಡಿಸಿರುವುದಕ್ಕೆ ಕಾರ್ಮಿಕ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ನೌಕರರ ಭವಿಷ್ಯ ನಿಧಿ (ಇಪಿಎಫ್ಒ) ಧರ್ಮದರ್ಶಿ ಮಂಡಳಿಯು ಕಳೆದ ಸೆಪ್ಟಂಬರ್ನಲ್ಲೇ ಈ ಪ್ರಸ್ತಾವವನ್ನು ಅಂಗೀಕರಿಸಿದ್ದು, ಹಣಕಾಸು ಸಚಿವಾಲಯದ ಅನುಮೋದನೆಗೆ ಕಾಯುತ್ತಿದೆ.
‘ಹಣಕಾಸು ಸಚಿವಾಲಯ ಈ ಪ್ರಸ್ತಾ ತಳ್ಳಿ ಹಾಕಿರುವುದನ್ನು ನಾವು ವಿರೋಧಿಸುತ್ತೇವೆ. ಇದು ಕಾರ್ಮಿಕ ವಿರೋಧಿ ನೀತಿ. ಕಾರ್ಮಿಕರ ಹಣಕ್ಕೆ ಕಾನೂನು ಪ್ರಕಾರ ಧರ್ಮದರ್ಶಿ ಮಂಡಳಿಯೇ ಬಡ್ಡಿ ದರ ನಿಗದಿಪಡಿಸಿದೆ’ ಎಂದು ಹಿಂದ್ ಮಜ್ದೂರ್ ಸಭಾದ ಕಾರ್ಯದರ್ಶಿ ಎ.ಡಿ ನಾಗ್ಪಾಲ್ ತಿಳಿಸಿದ್ದಾರೆ.
ಸುಮಾರು 4.71 ಕೋಟಿ ‘ಇಪಿಎಫ್ಒ’ ಫಲಾನುಭವಿಗಳಿಗೆ ಈ ಪರಿಷ್ಕೃತ ಬಡ್ಡಿ ದರದಿಂದ ಲಾಭವಾಗಲಿದೆ. ಆದರೆ, ಹಣಕಾಸು ಕಾರ್ಯದರ್ಶಿ ಅಶೋಕ್ ಚಾವ್ಲಾ, ಭವಿಷ್ಯ ನಿಧಿ ಠೇವಣಿಗೆ ಶೇ 9.5ರಷ್ಟು ಬಡ್ಡಿ ದರ ಅನುಮೋದಿಸುವುದನ್ನು ವಿರೋಧಿಸಿ ಕಾರ್ಮಿಕ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ ಎಂದು ನಾಗ್ಪಾಲ್ ಹೇಳಿದ್ದಾರೆ.
ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿರುವ ‘ಇಪಿಎಫ್ಒ’ ನೀತಿ ರೂಪಿಸುವ ಕೇಂದ್ರ ಧರ್ಮದರ್ಶಿ ಮಂಡಳಿಯು 2010-11ನೇ ಸಾಲಿನ ಭವಿಷ್ಯ ನಿಧಿ ಠೇವಣಿಗೆ ಶೇ 8.5 ರಿಂದ 9.5ರಷ್ಟಕ್ಕೆ ಬಡ್ಡಿ ದರ ಹೆಚ್ಚಿಸಬೇಕು ಎನ್ನುವ ಪ್ರಸ್ತಾವವನ್ನು ಸೆಪ್ಟಂಬರ್ನಲ್ಲೇ ಅಂಗೀಕರಿಸಿತ್ತು. 2005-06ನೇ ಸಾಲಿನಿಂದಲೂ ಭವಿಷ್ಯ ನಿಧಿಗೆ ಶೇ 8.5ರಷ್ಟು ಬಡ್ಡಿ ನೀಡಲಾಗುತ್ತಿದೆ.