ಬೆಂಗಳೂರು: ನೌಕರರಿಗೆ ಕಾರ್ಮಿಕರ ಭವಿಷ್ಯ ನಿಧಿ (ಪಿಎಫ್) ಸೌಲಭ್ಯ ನೀಡದ ಆರೋಪದ ಮೇಲೆ ಸಮಯ ಸುದ್ದಿ ವಾಹಿನಿಯ ಮಾಲೀಕರ ವಿರುದ್ಧ ಕಾರ್ಮಿಕರ ಭವಿಷ್ಯ ನಿಧಿ ಆಯುಕ್ತರು ಕಬ್ಬನ್ಪಾರ್ಕ್ ಠಾಣೆಗೆ ಬುಧವಾರ ದೂರು ನೀಡಿದ್ದಾರೆ.
`ಪಿಎಫ್ ಸೌಲಭ್ಯ ಒದಗಿಸುವುದಾಗಿ ಮಾಸಿಕ ವೇತನದಲ್ಲಿ ಹಣ ಕಡಿತಗೊಳಿಸಲಾಗುತ್ತಿದೆ. ಆದರೆ, ಆರೇಳು ತಿಂಗಳಿಂದ ಕಂಪೆನಿ ಕಟ್ಟಿಕೊಡಬೇಕಾದ ಪಿಎಫ್ ಹಣವನ್ನು ಪಾವತಿಸಿಲ್ಲ ಎಂದು ವಾಹಿನಿಯ ನೌಕರರು ಹದಿನೈದು ದಿನಗಳ ಹಿಂದೆ ದೂರು ನೀಡಿದ್ದರು. ನೌಕರರ ವೇತನ ಪಟ್ಟಿಯನ್ನು ಪರಿಶೀಲಿಸಿದಾಗ ಅದು ನಿಜವೆಂಬುದು ತಿಳಿಯಿತು. ಹೀಗಾಗಿ ವಾಹಿನಿಯ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಕಬ್ಬನ್ಪಾರ್ಕ್ ಠಾಣೆಗೆ ದೂರು ಕೊಡಲಾಗಿದೆ' ಎಂದು ಆಯುಕ್ತರು ತಿಳಿಸಿದ್ದಾರೆ.
ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಸುಮಾರು 400 ಮಂದಿ ನೌಕರರಿಗೆ ಆರೇಳು ತಿಂಗಳಿಂದ ಕಂಪೆನಿ ವತಿಯಿಂದ ನೀಡಬೇಕಾದ ಪಿಎಫ್ ಹಣ ಪಾವತಿಸಿಲ್ಲ. ಹೀಗಾಗಿ ಮಾಲೀಕರು ಸುಮಾರು ಒಂದು ಕೋಟಿ ರೂಪಾಯಿಗೂ ಅಧಿಕ ಹಣವನ್ನು ನೌಕರರಿಗೆ ಕೊಡಬೇಕಿದೆ. ಈ ಸಂಬಂಧ ಕಳೆದ ವಾರ ನೌಕರರೂ ಸಹ ಕಬ್ಬನ್ಪಾರ್ಕ್ ಠಾಣೆಗೆ ದೂರು ಕೊಟ್ಟಿದ್ದರು ಎಂದು ಅವರು ಹೇಳಿದರು.