ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಡಬ್ಲ್ಯುಡಿಯಲ್ಲಿ ಶೇ 10.1ರಷ್ಟು ಸಿಬ್ಬಂದಿ ವರ್ಗಾವಣೆ

Last Updated 4 ಡಿಸೆಂಬರ್ 2013, 8:25 IST
ಅಕ್ಷರ ಗಾತ್ರ

ಸುವರ್ಣಸೌಧ (ಬೆಳಗಾವಿ): ಪ್ರಸಕ್ತ ವರ್ಷ ಸಾಮಾನ್ಯ ವರ್ಗಾವಣೆ ಅವಧಿಯಲ್ಲಿ ಇಲಾಖೆಯ ಒಟ್ಟು ಸಿಬ್ಬಂದಿಯಲ್ಲಿ ಶೇಕಡಾ 6.5ರಷ್ಟು ಜನರನ್ನು ವರ್ಗಾವಣೆ ಮಾಡಲು ಅವಕಾಶ ಇತ್ತು. ಆದರೆ, ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರು ಶೇ 10.1ರಷ್ಟು ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಸಚಿವರೇ ಈ ವಿಷಯ ವನ್ನು ಬಹಿರಂಗಪಡಿಸಿದರು. ಪಕ್ಷೇತರ ಸದಸ್ಯ ಜಿ.ರಘು ಆಚಾರ್, ಅವರ ಪ್ರಶ್ನೆಗೆ ಉತ್ತರ ನೀಡಿದ ಮಹದೇವಪ್ಪ, ‘ಮುಖ್ಯಮಂತ್ರಿಯವರ ಅನುಮೋ ದನೆ ಪಡೆದ ಬಳಿಕವೇ ಹೆಚ್ಚುವರಿಯಾಗಿ ಸಿಬ್ಬಂದಿಯ ವರ್ಗಾವಣೆ ಮಾಡಿದ್ದೇನೆ’ ಎಂದು ತಿಳಿಸಿದರು.

ಕಳೆದ ಆರು ತಿಂಗಳಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ವಿವಿಧ ಕಾಮಗಾರಿಗಳಿಗೆ ಬಿಡುಗಡೆ ಮಾಡಿರುವ ಅನುದಾನದ ವಿವರ ಮತ್ತು ಇಲಾಖೆಯಲ್ಲಿ ನಡೆದಿರುವ ವರ್ಗಾವಣೆಗಳ ವಿವರವನ್ನು ರಘು ಆಚಾರ್‌ ಕೋರಿದ್ದರು. 1,200 ಪುಟಗಳಷ್ಟು ಬೃಹತ್ ಉತ್ತರವನ್ನು ಸಚಿವರು ಸಿ.ಡಿಯಲ್ಲಿ ಸದಸ್ಯರಿಗೆ ನೀಡಿದರು. ಬಳಿಕ ಪ್ರಮುಖ ಅಂಶಗಳನ್ನು ಸದನದ ಗಮನಕ್ಕೆ ತಂದರು.

ಬಳಿಕ ವ್ಯಂಗ್ಯದ ಧಾಟಿಯಲ್ಲಿ ಸಚಿವರನ್ನು ಪ್ರಶ್ನಿಸಿದ ರಘು ಆಚಾರ್, ‘ಮಹದೇವಪ್ಪ ಅವರೇ ಬಹಳ ಹುಮ್ಮಸ್ಸಿನಲ್ಲಿ ಮುನ್ನುಗುತ್ತಿದ್ದೀರಿ. ನಮಗೇನೂ ಅಭ್ಯಂತರ ಇಲ್ಲ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ನೌಕರರ ವರ್ಗಾವಣೆ ನಿಮ್ಮ ಅಧಿಕಾರ ವ್ಯಾಪ್ತಿಗೆ ಬಿಟ್ಟ ವಿಷಯ. ಆರೇ ತಿಂಗಳಲ್ಲಿ ಶೇ 10.1ರಷ್ಟು ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದೀರಿ. ವರ್ಷ ಪೂರ್ತಿ ಆಗುವ ಮುನ್ನ ಶೇ 100ರಷ್ಟು ಮಂದಿಯನ್ನೂ ವರ್ಗಾವಣೆ ಮಾಡುತ್ತೀರಾ’ ಎಂದು ಕೇಳಿದರು.

ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ವರ್ಗಾವಣೆ ನಮ್ಮ ಕಾಲದಲ್ಲಷ್ಟೇ ನಡೆದಿಲ್ಲ. ಹಿಂದೆಯೂ ನಮಗಿಂತ ಹೆಚ್ಚು ಮಂದಿಯನ್ನು ವರ್ಗಾವಣೆ ಮಾಡಿದ್ದರು. 2006ರಿಂದಲೂ ಇಲಾಖೆಯಲ್ಲಿ ಹೆಚ್ಚಿನ ವರ್ಗಾವಣೆ ನಡೆದಿದೆ’ ಎಂದರು.

ಯಾವ ಮಾನದಂಡದ ಆಧಾರದಲ್ಲಿ 1,994 ಮಂದಿಯನ್ನು ವರ್ಗಾವಣೆ ಮಾಡಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ‘ಸಾರ್ವಜನಿಕ ಹಿತಾಸಕ್ತಿ, ದೂರು, ಸ್ಥಳೀಯ ಶಾಸಕರ ಕೋರಿಕೆ ಆಧರಿಸಿ ವರ್ಗಾವಣೆ ಮಾಡಲಾಗಿದೆ. ಈ ವರ್ಗಾವಣೆಗೆ ಬೇರೆ ಯಾವುದೇ ಉದ್ದೇಶ ಇಲ್ಲ’ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿದರು.

ಎಲ್ಲಾ ಮನವಿಗಳು, ಅಹವಾಲುಗಳನ್ನು ನೀವು ಸ್ವತಃ ಪರಿಶೀಲಿಸಿ ಅಧಿಕಾರಿಗಳು, ನೌಕರರನ್ನು ವರ್ಗಾವಣೆ ಮಾಡಿದ್ದೀರಾ? ಶಿಕ್ಷಣ ಇಲಾಖೆಯ ಮಾದರಿಯಲ್ಲಿ ಕೌನ್ಸೆಲಿಂಗ್‌ ಮೂಲಕ ಅಧಿಕಾರಿ ಗಳು, ನೌಕರರನ್ನು ವರ್ಗಾವಣೆ ಮಾಡುವ ವಿಧಾನವನ್ನು ಲೋಕೋಪಯೋಗಿ ಇಲಾಖೆ ಯಲ್ಲೂ ಜಾರಿಗೆ ತರಲು ಸಾಧ್ಯವಿಲ್ಲವೇ ಎಂದು ಮತ್ತೆ ರಘು ಆಚಾರ್‌ ಕೇಳಿದರು.

ಶಾಸಕರ ಮಾತಿಗೆ ಮನ್ನಣೆ ನೀಡುವುದು, ಆಡಳಿತ ಯಂತ್ರದಲ್ಲಿ ಶೋಷಿತ ಸಮುದಾಯಗಳಿಗೆ ರಕ್ಷಣೆ ನೀಡುವ ದೃಷ್ಟಿಯಿಂದ ಹಾಲಿ ಪದ್ಧತಿಯೇ ಸೂಕ್ತ ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT