ಕೋಲಾರ: ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ಅಧಿಕಾರಿ ನಿಯೋಜಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಸುಗಟೂರಿನ ಗ್ರಾಮಸ್ಥರು ಬುಧವಾರ ನಗರದ ತಾಲ್ಲೂಕು ಪಂಚಾಯಿತಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.
ಸುಗೂಟುರು ಗ್ರಾಮ ಪಂಚಾಯಿತಿ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ಹೋಳೂರು ಗ್ರಾಮ ಪಂಚಾಯಿತಿ ಅಧಿಕಾರಿಗೆ ವಹಿಸಲಾಗಿತ್ತು. ಅವರು ಸೆ.19ರಂದು ಸೇವೆಯಿಂದ ಅಮಾನತಾಗಿದ್ದಾರೆ. ಅಂದಿನಿಂದಲೂ ಗ್ರಾಮ ಪಂಚಾಯಿತಿಗೆ ಯಾರನ್ನೂ ನಿಯೋಜಿಸಿಲ್ಲ ಎಂದು ಆರೋಪಿಸಿದರು.
ಅಧಿಕಾರಿಯನ್ನು ನಿಯೋಜಿಸಬೇಕು ಎಂದು ಕೋರಿ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಪಂಚಾಯಿತಿ ಇಒಗೆ ಸೂಚನೆ ನೀಡಿ ಹಲವು ದಿನಗಳಾಗಿವೆ. ಆದರೆ ಅಧಿಕಾರಿ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇಒ ವಿರುದ್ಧ ಧಿಕ್ಕಾರ ಕೂಗಿದರು.
ಅಧಿಕಾರಿ ಇಲ್ಲದ ಪರಿಣಾಮ ಗ್ರಾಮ ಪಂಚಾಯಿತಿಯ ಎಲ್ಲ ಕಡತಗಳನ್ನೂ ತಾಲ್ಲೂಕು ಪಂಚಾಯಿತಿಗೆ ತರಿಸಿಕೊಂಡು ಗುಟ್ಟಾಗಿ ಕೆಲಸ ಮಾಡಲಾಗಿದೆ. ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ. ಜನಸಾಮಾನ್ಯರ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ. ರುಕ್ಮಿಣಮ್ಮ ಎಂಬುವರನ್ನು ನಿಯೋಜಿಸಿದ್ದರೂ ಅವರು ಅಧಿಕಾರ ಸ್ವೀಕರಿಸಿಲ್ಲ ಎಂದು ಆರೋಪಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ವಿಶ್ವನಾಥ, ಮಂಜುನಾಥ, ಮುನಿವೆಂಕಟಪ್ಪ, ಮುಖಂಡರಾದ ನಾರಾಯಣಸ್ವಾಮಿ, ವೆಂಕಟೇಶಯ್ಯ, ಕೆ.ರವಿ, ಕೃಷ್ಣಪ್ಪ, ನಾಗಪ್ಪ, ಚಲಪತಿ ಪಾಲ್ಗೊಂಡಿದ್ದರು.