ನವದೆಹಲಿ (ಪಿಟಿಐ): ತಮ್ಮ ವಿರುದ್ಧ ಇರುವ ಪಿತೃತ್ವ ವಿವಾದದ ವಿಚಾರಣೆಯನ್ನು ರಹಸ್ಯವಾಗಿ ನಡೆಸಬೇಕೆಂದು ಕೋರಿ ಕಾಂಗ್ರೆಸ್ನ ಹಿರಿಯ ಮುಖಂಡ ಎನ್.ಡಿ.ತಿವಾರಿ ಅವರು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಸೋಮವಾರ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘ್ವಿ ಹಾಗೂ ಎಸ್.ಜೆ.ಮುಖ್ಯೋಪಾಧ್ಯಾಯ ಅವರನ್ನು ಒಳಗೊಂಡ ರಜಾ ಕಾಲದ ಪೀಠದ ಮುಂದೆ ಹಾಜರಾದ ತಿವಾರಿ ಪರ ವಕೀಲರು, `ತಿವಾರಿ ಅವರ ವಿರುದ್ಧ ದಾವೆ ಹೂಡಿರುವ ರೋಹಿತ್ ಶೇಖರ್ ಪ್ರತಿ ಬಾರಿಯ ವಿಚಾರಣೆಯನ್ನೂ ಮಾಧ್ಯಮಗಳಿಗೆ ವಿವರಿಸುತ್ತಿದ್ದಾರೆ~ ಎಂದು ದೂರಿದರು.
ತಿವಾರಿ ವಕೀಲರ ವಾದವನ್ನು ತಳ್ಳಿಹಾಕಿದ ಪೀಠವು, `ಮಾಧ್ಯಮದೊಂದಿಗೆ ಮಾತನಾಡದಂತೆ ಯಾರನ್ನೂ ತಡೆಯಲಾಗದು. ಡಿಎನ್ಎ ಪರೀಕ್ಷೆ ವರದಿಯನ್ನು ರಹಸ್ಯವಾಗಿಡಬಹುದು. ಆದರೆ ವಿಚಾರಣೆಯನ್ನು ರಹಸ್ಯವಾಗಿಡಲು ಸಾಧ್ಯವಿಲ್ಲ~ ಎಂದು ಹೇಳಿತು.