ಪಿರಿಯಾಪಟ್ಟಣ: ತಾಲ್ಲೂಕಿನ ಕಾಡಂಚಿನ ಗ್ರಾಮವಾದ ಅಬ್ಬಳತಿ ಸಂಪಿಗೆಕಟ್ಟೆ ಗ್ರಾಮದಲ್ಲಿ ಆನೆಗಳ ಹಿಂಡು ಇತ್ತೀಚೆಗೆ ರಾತ್ರಿ ವೇಳೆ ದಾಳಿ ನಡೆಸಿದ್ದು ಹಲವು ರೈತರ ಬೆಳೆಯನ್ನು ಹಾಳು ಮಾಡಿವೆ. ಅಬ್ಬಳತಿ ಸಂಪಿಗೆಕಟ್ಟೆ ಗ್ರಾಮದಲ್ಲಿ 7 ಆನೆಗಳ ಹಿಂಡು ನುಗಿದ್ದು ವಿ.ಡಿ.ತಮ್ಮಯ್ಯ ಎಂಬುವವರಿಗೆ ಸೇರಿದ 1/2 ಎಕರೆಯಷ್ಟು ಭತ್ತದ ಪಸಲನ್ನು ಹಾಳು ಮಾಡಿವೆ.
ಅಬ್ಬಳತಿ ಸಂಪಿಗೆಕಟ್ಟೆ ಪಿ.ಟಿ.ರಘುನಾಥ್ ಎಂಬುವವರಿಗೆ ಸೇರಿದ 1 ಎಕರೆಯಷ್ಟು ಮುಸುಕಿನ ಜೋಳವನ್ನು ತಿಂದು ಹಾಕಿವೆ. ನವೀನ್ಕುಮಾರ್ರವರ ಜಮೀನಿನಲ್ಲಿ ಜೋಳ, ನವೀನ್ಮುಂಡ ಪೂಜಾರಿರವರ ಜಮೀನಿನಲ್ಲಿ 1ಎಕರೆ ಮುಸುಕಿನ ಜೋಳ ತಿಂದು ಹಾಳು ಮಾಡಿವೆ ಹಾಗೂ ಪತ್ರೋಸ್ ಎಂಬುವವರ 1/2 ಎಕರೆ ಗದ್ದೆಯಲ್ಲಿ ಪೈರನ್ನು ತುಳಿದು ಹಾಳು ಮಾಡಿವೆ.
ಅಲ್ಲದೆ ಜಮೀನಿಗೆ ಅಳವಡಿಸಲಾಗಿದ್ದ ತಂತಿಬೇಲಿಗಳನ್ನು ತುಂಡುಮಾಡಿದ್ದು ನಷ್ಟ ಉಂಟುಮಾಡಿವೆ. ಹೀಗೆ ಪ್ರತಿದಿನ ರಾತ್ರಿ ಆಗುತ್ತಿದ್ದಂತೆ ಆನೆಗಳ ಕಾಟ ಹೆಚ್ಚಾಗಿದ್ದು ಕಾಡಂಚಿನಲ್ಲಿ ತೆಗೆಯಲಾಗಿದ್ದ ಟ್ರಂಚ್ ಮುಚ್ಚಿಹೋಗಿದ್ದು ಅರಣ್ಯ ಇಲಾಖೆ ಈ ಬಗ್ಗೆ ಗಮನ ಹರಿಸಿಲ್ಲ.
ಅನೇಕ ಬಾರಿ ದೂರು ನೀಡಿದರೂ ನಿರ್ಲಕ್ಷ್ಯ ವಹಿಸಿದೆ. ಇದರಿಂದ ವರ್ಷವಿಡಿ ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬರುವ ಸಮಯದಲ್ಲಿ ಆನೆಗಳ ಪಾಲಾಗುತ್ತಿದ್ದು ಇದರಿಂದ ಈ ಭಾಗದ ರೈತರು ಕಂಗಾಲಾಗಿದ್ದಾರೆ ಎಂದು ರೈತ ಪಿ.ಟಿ.ರಘುನಾಥ್ ಆರೋಪಿಸಿದ್ದಾರೆ.
ಈ ಬಗ್ಗೆ ಅರಣ್ಯ ಇಲಾಖೆ ಇನ್ನಾದರು ಎಚ್ಚೆತ್ತು ಕಾಡಿನಿಂದ ಹೊರಬರುವ ಆನೆಗಳು ಜಮೀನಿನ ಕಡೆ ಬರದಂತೆ ಆನೆಕ್ಯಾಂಪ್ ಹಾಕಬೇಕು ಹಾಗೂ ಇಲಾಖೆಯವರು ಇದಕ್ಕೆ ಸೂಕ್ತ ಟ್ರಂಚ್ ನಿರ್ಮಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಎಚ್.ಡಿ.ಕೋಟೆ ವರದಿ
ಎಚ್.ಡಿ.ಕೋಟೆ: ಕಾಡಾನೆ ದಾಳಿ ಯಿಂದ ತಾಲ್ಲೂಕಿನ ಬೂದನೂರು ಸಮೀಪದ ವಿವಿಧ ಗ್ರಾಮಗಳ ರೈತರ ಬೆಳೆಗಳು ನಾಶವಾದರೆ ಇನ್ನೊಂದುಕಡೆ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹಿಳೆಯರು ಮತ್ತು ಮಕ್ಕಳು ಆತಂಕಗೊಂಡ ಘಟನೆ ಶುಕ್ರವಾರ ನಡೆಯಿತು.
ಎಡತೊರೆ ಗ್ರಾಮದ ಜಮೀನುಗಳಲ್ಲಿ ಕಾಣಿಸಿಕೊಂಡ ಮೂರು ಆನೆಗಳಲ್ಲಿ ಒಂದು ಗಂಡಾನೆ ಬೇರ್ಪಟ್ಟು ಸಿಕ್ಕ ಸಿಕ್ಕ ಕಡೆ ನಡೆಯತೊಡಗಿತು. ಈ ಹಿನ್ನಲೆ ಯಲ್ಲಿ ಜಮೀನುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರೈತರು, ಮಹಿಳೆಯರು ಹಾಗೂ ಮಕ್ಕಳೂ ಸೇರಿದಂತೆ ಎಲ್ಲರೂ ಆತಂಕಗೊಂಡರು.
ಕಾಡಂಚಿನ ಭಾಗದ ರೈತರುಗಳ ಕುಟುಂಬದವರಿಗೆ ಯಾವುದೇ ಭದ್ರತೆ ಇಲ್ಲದಂತಾಗಿದ್ದು, ಕಾಡು ಪ್ರಾಣಿಗಳ ದಾಳಿಯಿಂದ ಯಾವಾಗ ಏನು ತೊಂದರೆ ಕಾದಿದೆಯೋ ಗೊತ್ತಿಲ್ಲದಂತಾಗಿದೆ. ರೈತರು ಬೆಳೆದಿದ್ದ ಹತ್ತಿ,ರಾಗಿ, ಜೋಳ, ಬಾಳೆ ಮತ್ತು ಕಬ್ಬಿನಗದ್ದೆಗಳಿಗೆ ದಾಳಿಯಿಟ್ಟು ಲಕ್ಷಾಂತರ ಬೆಳೆ ನಷ್ಟವುಂಟು ಮಾಡಿದೆ ಎಂದು ರೈತರು ಆರೋಪಿಸಿದ್ದಾರೆ.
ಬೆಳೆಗಳ ನಾಶವಾದರೆ ಅಲ್ಪ ಸ್ವಲ್ಪ ಪರಿಹಾರ ನೀಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಭರವಸೆ ನೀಡಿ ಸುಮ್ಮನಾಗುತ್ತಾರೆ. ಬೆಳೆ ನಷ್ಟದ ಪರಿಹಾರವನ್ನು ನೀಡುವುದೇ ಇಲ್ಲ, ಅವರು ನೀಡುವ ಐನೂರು ಸಾವಿರ ರೂಗಳಿಗೆ ವಾರಗಟ್ಟಲೆ ಅಲೆಸುತ್ತಾರೆ ಎಂದು ರವೀಶ್ಬೂದನೂರು ಆರೋಪಿಸಿದ್ದಾರೆ.
ಒಂಟಿ ಸಲಗದ ಕೋಪಕ್ಕೆ ಬೂದನೂರು ಗ್ರಾಮಕ್ಕೆ ಸರಬರಾಜು ಮಾಡುತ್ತಿದ್ದ ಕುಡಿಯುವ ನೀರಿನ ಪಂಪ್ಸೆಟ್ ಮನೆ ಹಾಳಾಗಿದೆ. ಕೆಲ ಗಿರಿಜನರು ಮತ್ತು ಯುವಕರು ಆನೆಯನ್ನು ಹಿಂಬಾಲಿಸಿ ಓಡುತ್ತಿದ್ದು, ಕಲ್ಲು ಎಸೆತದಲ್ಲಿ ತಡಗಿದ್ದರು ಇದರಿಂದ ಕೆರಳಿದ ಆನೆ ಜನರತ್ತ ಕೋಪದಿಂದ ಅಟ್ಟಾಡಿಸಿದ ಘಟನೆ ನಡೆಯಿತು.
ಸ್ಥಳಕ್ಕೆ ಅಗಮಿಸಿದ ವಲಯ ಅರಣ್ಯಾಧಿಕಾಗಳಾದ ಪ್ರವೀಣ್ಕುಮಾರ್ ಮತ್ತು ಸಂತೋಷ್ನಾಯಕ್ ಮತ್ತು ಸಿಬ್ಬಂದಿಗಳು ಮೇಟಿಕುಪ್ಪೆ ರಸ್ತೆಯ ಮೂಲಕ ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.