ಶಿರಸಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತನ್ನ ವೆಬ್ಸೈಟ್ಲ್ಲಿ ಭಾರತದ ರಾಷ್ಟ್ರಧ್ವಜವನ್ನು ತಲೆಕಳಗೆ ಮಾಡಿ ಪ್ರಕಟಿಸಿರುವುದನ್ನು ಶ್ರೀರಾಮ ಸೇನೆ ಪ್ರಮುಖ ಪ್ರಮೋದ ಮುತಾಲಿಕ್ ಖಂಡಿಸಿದ್ದಾರೆ.
ನಗರದಲ್ಲಿ ಗುರುವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಸಿಬಿ ದೇಶಕ್ಕೆ ಅಪಮಾನ ಮಾಡುವಂತಹ ಕೃತ್ಯ ಎಸಗಿದ್ದರೂ ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಳ್ಳದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
`ಪ್ರಕರಣದ ಬಗ್ಗೆ ವಿದೇಶಾಂಗ ಸಚಿವರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ವಿಷಯದಲ್ಲೂ ಕೇಂದ್ರ ಸರ್ಕಾರ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದೆ' ಎಂದು ಅವರ ದೂರಿದರು.
ದೇಶದ 125 ಕೋಟಿ ಜನತೆಗೆ ಅವಮಾನ ಮಾಡಿದರೂ ಸರ್ಕಾರ ಉತ್ತರ ನೀಡುತ್ತಿಲ್ಲ. ಈ ಕುರಿತು ರಾಷ್ಟ್ರಪತಿ, ಪ್ರಧಾನಮಂತ್ರಿ, ಗೃಹಮಂತ್ರಿ ಹಾಗೂ ವಿದೇಶಾಂಗ ಸಚಿವರಿಗೆ ಪತ್ರ ಬರೆಯುವುದಾಗಿ ಮುತಾಲಿಕ್ ತಿಳಿಸಿದರು.
ಮ್ಯೋಚ್ ಪಿಕ್ಸಿಂಗ್, ಬೆಟ್ಟಿಂಗ್, ಕಪ್ಪುಹಣ ಚಲಾವಣೆಗಾಗಿ ಬಿಸಿಸಿಐ ಹಾಗೂ ಕೇಂದ್ರ ಸರ್ಕಾರ ಜಂಟಿಯಾಗಿ ಭಾರತ-ಪಾಕ್ ಕ್ರಿಕೆಟ್ ಟೂರ್ನಿ ಆಯೋಜಿಸುತ್ತಿರುವುದು ವಿಷಾದನೀಯ ಎಂದರು.
`ಹಿಂದೆ, 2007ರಲ್ಲಿ 132 ಜನ ಪಾಕಿಸ್ತಾನದ ಪ್ರಜೆಗಳು ವೀಸಾ ಪಡೆದು ಕ್ರಿಕೆಟ್ ನೋಡಲು ಬಂದವರು ಹಿಂತಿರುಗಿಲ್ಲ. ಈ ಬಾರಿ ಮೂರು ಸಾವಿರ ಜನರಿಗೆ ವೀಸಾ ನೀಡಲಾಗಿದೆ. ಇದರದಲ್ಲಿ 130 ಜನ ಮಾತ್ರ ಕ್ರಿಕೆಟ್ ನೋಡಲು ಆಗಮಿಸಿದ್ದಾರೆ' ಎಂದು ಅಂಕಿಸಂಖ್ಯೆಗಳನ್ನು ನೀಡಿದರು.
`ನಾನು ಕ್ರಿಕೆಟ್ ವಿರೋಧಿಯಲ್ಲ. ಆದರೆ, ಪಾಕಿಸ್ತಾನ ತಂಡದ ವಿರುದ್ಧ ಟೂರ್ನಿ ಸಂಘಟನೆಗೆ ನನ್ನ ವಿರೋಧವಿದೆ. ನಾಲ್ಕು ವರ್ಷಗಳ ನಂತರ ಮತ್ತೆ ಪಾಕ್ ಜೊತೆ ಕ್ರಿಕೆಟ್ ಪಂದ್ಯ ಆಯೋಜಿಸಿರುವುದು ನೋಡಿದರೆ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ' ಎಂದರು.
`ಸಚಿವ ಸಿ.ಟಿ. ರವಿ ತಮ್ಮ ರಾಜಕೀಯ ಲಾಭಕ್ಕಾಗಿ ದತ್ತಜಯಂತಿ ಆಚರಿಸುತ್ತಿದಾರೆ. ಹಿಂದುತ್ವದ ನಿಜವಾದ ಕಳಕಳಿ ಇದ್ದರೆ ಕುಸಿದು ಬಿದ್ದಿರುವ ದತ್ತ ಗುಹೆ ದುರಸ್ಥಿ ಮಾಡಿಸಲು ಮೂರು ವರ್ಷ ಹಿಡಿಯುತ್ತದೆಯೇ ಎಂದು ಪ್ರಶ್ನಿಸಿದ ಅವರು, ಇದೇ ವಿಷಯದಿಂದ ಚುನಾವಣೆ ಗೆದ್ದಿರುವ ಅವರು, ಎರಡು ವರ್ಷದಲ್ಲಿ 8 ಕೋಟಿ ಕಟ್ಟಿದ್ದಾರೆ' ಎಂದು ನುಡಿದರು. ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ವಿನಾಯಕ ಗೌಡ, ಸತೀಶ ಕುಮಟಾಕರ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.