ತ್ರಿರುವಾಂಕೂರು ಮಹಾರಾಜರ ಬೇಸಿಗೆ ಕಾಲದ ರೆಸಾರ್ಟ್ ಎನಿಸಿಕೊಂಡಿದ್ದ ಈ ಗಿರಿಧಾಮದ ಹೆಸರು ಪೀರ್ಮಡೆ. ಸಮುದ್ರ ಮಟ್ಟದಿಂದ 915 ಮೀಟರ್ ಎತ್ತರ ಇದೆ.
ಕೇರಳ ರಾಜ್ಯದ ಈ ಸುಂದರ ಗಿರಿಧಾಮ ಚಹಾ, ಕಾಫಿ , ಏಲಕ್ಕಿ, ಕಾಳು ಮೆಣಸು ಮತ್ತು ರಬ್ಬರ್ ತೋಟಗಳಿಗೆ ಹೆಸರುವಾಸಿ. ಜೊತೆಗೆ ಪೈನ್ ಮತ್ತು ತೆಂಗಿನ ಮರಗಳ ಸಾಲುಗಳು ಹಾಗೂ ನೈಸರ್ಗಿಕ ಹುಲ್ಲುಗಾವಲು ಇಲ್ಲಿಗೆ ಮತ್ತೆ ಮತ್ತೆ ಬರುವಂತೆ ಪ್ರೇರೇಪಿಸುತ್ತವೆ.
ಸೂಫಿ ಸಂತ ಪೀರ್ ಮಹಮ್ಮದ್ ಇಲ್ಲಿಗೆ ಬಂದಿದ್ದರು ಎಂಬ ಪ್ರತೀತಿ ಇರುವುದರಿಂದ ಈ ಬೆಟ್ಟಸಾಲುಗಳಿಗೆ `ಪೀರ್ಮಡೆ~ ಎನ್ನುವ ಹೆಸರು ಬಂದಿದೆ.
ಟ್ರೆಕ್ಕಿಂಗ್ ಮತ್ತು ಪರಿಸರ ಪ್ರೇಮಿಗಳಿಗೆ ಇಲ್ಲಿ ನವೋಲ್ಲಾಸ ಸಿಗುತ್ತದೆ. ಈ ಗಿರಿಧಾಮದಲ್ಲಿ ದೇಹ, ಮನಸ್ಸು ಹಗುರವಾದಂಥ ಭಾವ ಮೂಡುತ್ತದೆ. ವರ್ಷದ ಯಾವುದೇ ಸಮಯದಲ್ಲಾದರೂ ಭೇಟಿ ನೀಡಬಹುದಾದ ಈ ಪರ್ವತಶ್ರೇಣಿಯಲ್ಲಿ ಸಿಗುವ ಪಟ್ಟುಮಲಾ ಪ್ರದೇಶದಲ್ಲಿ ಚಹಾ ಕಾರ್ಖಾನೆ ಮತ್ತು ಹೂ ತೋಟಗಳಿವೆ. ಹಾಗೆಯೇ ಬೆಟ್ಟದ ಮೇಲಿಂದ ಧುಮುಕುವ ಮೆಲೊರಮ, ನಲ್ಲತಣ್ಣಿ, ಪಂಚಲಿಮೆಡು ಮತ್ತು ವಲಂಜಂಕಣಂ ಜಲಪಾತಗಳಿವೆ.
ಸೈಕ್ಲಿಂಗ್ ಮತ್ತು ಕುದುರೆ ಸವಾರಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರನ್ನು ಆಕರ್ಷಿಸುವ ಜನಪ್ರಿಯ ಚಟುವಟಿಕೆಗಳು. ಇಲ್ಲಿಗೆ ಸಮೀಪದ ಕುಟ್ಟಿಕನಂ ಪಟ್ಟಣದಿಂದ ಟ್ರೆಕ್ಕಿಂಗ್ ಸೌಲಭ್ಯ ಇದೆ. ಪೀರ್ಮಡೆಯಲ್ಲಿ ಆಯುರ್ವೇದಿಕ್ ಕೇಂದ್ರವೊಂದಿದ್ದು, ಅಲ್ಲಿ ಅಪರೂಪದ ಸಸ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಕೊಟ್ಟಾಯಂನಿಂದ ಇಲ್ಲಿಗೆ 85 ಕಿಮೀ ದೂರ. ಹತ್ತಿರದಲ್ಲಿಯೇ ಪೆರಿಯಾರ್ ವನ್ಯಜೀವಿ ಸಂರಕ್ಷಣಾ ವಲಯ ಇದೆ.