ತಿರುವನಂತಪುರ (ಪಿಟಿಐ): ಹೊಲಗಳಿಗೆ ನುಗ್ಗಿ ಬೆಳೆ ಹಾಳು ಮಾಡುತ್ತಿದ್ದ ಪುಂಡಾನೆಯೊಂದಕ್ಕೆ ವೈನಾಡು ಜಿಲ್ಲೆಯ ವನ್ಯ ವಿಭಾಗದವರು ರೇಡಿಯೊ ಕಾಲರ್ ಅಳವಡಿಸಿದ್ದಾರೆ.ಅರಣ್ಯದ ಅಂಚಿನ ಹಳ್ಳಿಗಳ ಹೊಲಗಳ ಬೆಳೆ ಹಾಳು ಮಾಡುತ್ತಿದ್ದ ಈ ಪುಂಡಾನೆಗೆ ಅಳವಡಿಸಿರುವ ರೇಡಿಯೊ ಕಾಲರ್ ಟೆಲಿಮೀಟರ್ ಕಳುಹಿಸುವ ಸಂಕೇತಗಳ ಅನುಸಾರ ವನ್ಯಜೀವಿ ಮೇಲ್ವಿಚಾರಕರು ಆಯಾ ಹಳ್ಳಿಗಳಿಗೆ ಮುನ್ನೆಚ್ಚರಿಕೆ ಸಂದೇಶ ನೀಡಲಿದ್ದಾರೆ.
ಅರಣ್ಯದ ಅಂಚಿನ ಹಳ್ಳಿಗಳಲ್ಲಿ ಕಾಡು ಪ್ರಾಣಿಗಳು ಹಾಗೂ ಮನುಷ್ಯರ ನಡುವೆ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಡಾನೆಗೆ ರೇಡಿಯೊ ಕಾಲರ್ ಹಾಕುವ ಕ್ರಮ ತೆಗೆದುಕೊಳ್ಳಲಾಗಿದೆ.
ಮಾನವನ ಜೀವಕ್ಕೇ ಅಪಾಯಕಾರಿಯಾಗಿರುವ ಇನ್ನೊಂದು ಕಾಡಾನೆಗೂ ರೇಡಿಯೊ ಕಾಲರ್ ಅಳವಡಿಸುವ ಕಾರ್ಯ ಜಾರಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.