ಅಜಂತಾ ಕಲ್ಚರಲ್ ಎಜುಕೇಶನ್ ಸೊಸೈಟಿ: ಭಾನುವಾರ ಪವಿತ್ರಾ ರಾಜೇಶ್ ಅವರ ಭರತನಾಟ್ಯ ರಂಗಪ್ರವೇಶ (ನಟುವಾಂಗ: ಗುರು ಎಲ್. ಮಂಜುಳ, ಹಾಡುಗಾರಿಕೆ: ವಿದುಷಿ ದೀಪ್ತಿ ಶ್ರೀನಾಥ್, ಮೃದಂಗ: ಎಸ್.ವಿ. ಗಿರಿಧರ್, ಕೊಳಲು: ಎಸ್.ವಿ. ಭಾಸ್ಕರ್, ಪಿಟೀಲು: ವಿದ್ವಾನ್ ಸಿ.ಮಧುಸೂದನ್, ಮೋರ್ಚಿಂಗ್ ಪ್ಯಾಡ್: ವಿದ್ವಾನ್ ವೈ. ಧಾತ್ರಿ)
ಪವಿತ್ರಾ, ಬಾಲ್ಡ್ವಿನ್ ಬಾಲಕಿಯರ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ. ಪುಟ್ಟಪಾದದ ಈ ಪುಟಾಣಿ ನಾಟ್ಯಕ್ಷೇತ್ರದಲ್ಲಿ ಈಗಾಗಲೇ ದೊಡ್ಡ ಹೆಜ್ಜೆ ಇಟ್ಟಿದ್ದಾಳೆ. ಪಠ್ಯ ಚಟುವಟಿಕೆಯಲ್ಲೂ ಮುಂದಿರುವ ಈಕೆ ನೃತ್ಯದ ಜೊತೆ ಯೋಗ, ಸಂಗೀತದಲ್ಲೂ ಪರಿಣತಿ ಸಾಧಿಸಿದ್ದಾಳೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ವೇದಿಕೆಗಳಲ್ಲಿ ನೃತ್ಯ ಪ್ರತಿಭೆ ಪ್ರದರ್ಶಿಸಿದ್ದಾಳೆ.
ನಂಜನಗೂಡು, ಗೊರವನಹಳ್ಳಿ, ಗವಿ ಗಂಗಾಧರೇಶ್ವರ, ಇಸ್ಕಾನ್, ಶ್ರೀಪುರಂ ಸ್ವರ್ಣ ದೇವಾಲಯ, ತಿರುಮಲ-ತಿರುಪತಿ ದೇವಾಲಯಗಳಲ್ಲಿ ನೃತ್ಯ ಸೇವೆ ನೀಡಿದ್ದಾಳೆ. ನಂದಿ ಉತ್ಸವ, ಹಂಪಿ ಉತ್ಸವ, ಧಾರವಾಡದ ವಸಂತೋತ್ಸವ ಮತ್ತು ಮುಂಬೈನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಮೆಚ್ಚುಗೆ ಪಡೆದಿದ್ದಾಳೆ.
ಈಕೆ ಶಾಸ್ತ್ರೀಯ ನೃತ್ಯದ ಮೊದಲ ಹೆಜ್ಜೆ ಇಟ್ಟಿದ್ದು 3ರ ಎಳವೆಯಲ್ಲಿ. ತಂದೆ ರಾಜೇಶ್ ಮತ್ತು ತಾಯಿ ಲೀಲಾವತಿ ಮಗಳಲ್ಲಿ ಸಾಂಸ್ಕೃತಿಕ ಆಸಕ್ತಿ ಹುಟ್ಟುಹಾಕುವ ಉದ್ದೇಶದಿಂದ ಗುರು ಲಕ್ಷ್ಮಿ ಎನ್. ಮೂರ್ತಿ ಅವರ ಅಜಂತಾ ಕಲ್ಚರಲ್ ಎಜುಕೇಶನ್ ಸೊಸೈಟಿಗೆ ಸೇರಿಸಿದರು.
ಅಲ್ಲಿ ಗುರು ಎಲ್. ಮಂಜುಳ ಅವರ ಮಾರ್ಗದರ್ಶನದಲ್ಲಿ ನೃತ್ಯದಲ್ಲಿ ಕಠಿಣ ಪರಿಶ್ರಮ ತೋರಿದಳು. ರಂಗಪ್ರವೇಶದಂತಹ ದೊಡ್ಡ ಸಾಹಸದ ಬಯಕೆಯಿಂದ ಈಗ ತನ್ನ ನೃತ್ಯ ಪ್ರತಿಭೆ ಒರೆಗೆ ಹಚ್ಚಲು ಮುಂದಾಗಿದ್ದಾಳೆ.
ಕಳೆದ 28 ವರ್ಷಗಳಿಂದ ಅಜಂತಾ ಸಾಂಸ್ಕೃತಿಕ ಸಂಸ್ಥೆಯನ್ನು ಮುನ್ನಡೆಸುತ್ತ ಬಂದಿರುವ ಲಕ್ಷ್ಮಿಮೂರ್ತಿ ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯ ಅವರ ಮೊಮ್ಮಗಳು. ಅವರು ಹುಟ್ಟಿದ್ದು, ವಿದ್ಯಾಭ್ಯಾಸ ಮಾಡಿದ್ದು ಎಲ್ಲವೂ ಹಾಸನ ಜಿಲ್ಲೆಯಲ್ಲಿ. ಕರ್ನಾಟಕ ಕಂಡ ಮಹಾನ್ ನೃತ್ಯ ದಂಪತಿಯಾದ ಯು.ಎಸ್. ಕೃಷ್ಣರಾವ್ ಮತ್ತು ಚಂದ್ರಭಾಗಾ ದೇವಿ ಬಳಿ ನೃತ್ಯಾಭ್ಯಾಸ ಮಾಡಿರುವ ಅವರು ಭರತನಾಟ್ಯದಲ್ಲಿ ವಿದ್ವತ್ ಪಡೆದಿದ್ದಾರೆ. ಸುಗಮ ಸಂಗೀತ, ಗಮಕ ಸಂಗೀತ, ಚಿತ್ರಕಲೆ, ನಟನೆ, ಯೋಗ. ಹೀಗೆ ಬಹುಮುಖ ಪ್ರತಿಭೆ ಅವರದ್ದು.
ಅತಿಥಿಗಳು: ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯರು, ಸಚಿವ ಸುರೇಶ್ ಕುಮಾರ್, ಡಾ. ಅಜಿತ್ ಪ್ರಸಾದ್, ಡಾ. ಪದ್ಮಿನಿ ಪ್ರಸಾದ್, ಮೋಕ್ಷಗುಂಡಂ ಆರ್. ಶೇಷಾದ್ರಿ, ಡಿ.ಎಚ್. ರಾಮಕೃಷ್ಣ, ಬಿ.ಟಿ. ಮುನಿಯಪ್ಪ, ಡಿ. ಲಿಂಗಯ್ಯ, ಅಜಂತ ಎಸ್. ರಂಗಸ್ವಾಮಿ, ಮೇಘನಾ ವೆಂಕಟ್. ಸ್ಥಳ: ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ. ಸಂಜೆ 6.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.