ಹಾಸನ: ನಗರದ ವಿವಿಧ ಭಾಗಗಳಲ್ಲಿ ಹಲವು ತಿಂಗಳುಗಳಿಂದ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ 18 ಮಂದಿ ಭಿಕ್ಷುಕರನ್ನು ಬುಧವಾರ ಹಿಡಿದು ತುಮಕೂರಿನ ಪುನರ್ವಸತಿ ಕೇಂದ್ರಕ್ಕೆ ಸಾಗಿಸಲಾಯಿತು.
ಭಿಕ್ಷುಕರಲ್ಲಿ ಹತ್ತು ಮಂದಿ ಪುರುಷರು ಹಾಗೂ ಎಂಟು ಮಹಿಳೆಯರ್ದ್ದಿದರು. ಇವರಲ್ಲೊಬ್ಬರು ಮಾನಸಿಕವಾಗಿ ಅಸ್ವಸ್ಥ ವ್ಯಕ್ತಿಯೂ ಸೇರಿದ್ದಾರೆ.
ನಗರಸಭೆ ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ಆಡಳಿತ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದರು. ಬಸ್ ನಿಲ್ದಾಣ, ಸಂಪಿಗೆ ರಸ್ತೆ ಮುಂತಾದ ಪ್ರದೇಶಗಳಲ್ಲಿ ವಾಹನದಲ್ಲೇ ಸಂಚರಿಸಿದ ಸಿಬ್ಬಂದಿ ಅಲ್ಲಲ್ಲಿ ಭಿಕ್ಷೆ ಬೇಡುತ್ತಿದ್ದವರನ್ನು ವಾಹನದಲ್ಲಿ ಹತ್ತಿಸಿಕೊಂಡು ತುಮಕೂರಿಗೆ ಕರೆದೊಯ್ದರು.
ತುಮಕೂರಿನಲ್ಲಿ ಸಮಾಜಕಲ್ಯಾಣ ಇಲಾಖೆ ನಡೆಸುತ್ತಿರುವ ಪುನರ್ವಸತಿ ಕೇಂದ್ರದಲ್ಲಿ ಇವರಿಗೆ ಆಶ್ರಯ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪತ್ರಕರ್ತರೊಡನೆ ಮಾತನಾಡಿದ ತಹಸೀಲ್ದಾರ ಮಥಾಯಿ, `ನಗರದ ಎಲ್ಲೆಡೆ ಭಿಕ್ಷುಕರು ಓಡಾಡುತ್ತಿರುವ ಬಗ್ಗೆ ನಾಗರಿಕರಿಂದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲು ತೀರ್ಮಾನಿಸಿದ್ದೆವು. ಕಳೆದ ಹಲವು ತಿಂಗಳಿಂದ ಮಾನಸಿಕವಾಗಿ ಅಸ್ವಸ್ಥಗೊಂಡಿರುವ ವ್ಯಕ್ತಿಯೊಬ್ಬರು ಸಂಪಿಗೆ ರಸ್ತೆಯಲ್ಲಿ ಅರೆನಗ್ನರಾಗಿ ಓಡಾಡುತ್ತಿದ್ದರು. ಇವರನ್ನು ಆಸ್ಪತ್ರೆಗೆ ಸೇರಿಸಿದ್ದರೂ ಪ್ರಯೋಜನವಾಗಲಿಲ್ಲ. ಈಗ ಅವರನ್ನೂ ತುಮಕೂರಿಗೆ ಸ್ಥಳಾಂತರಿಸಲಾಗಿದೆ~ ಎಂದು ತಿಳಿಸಿದರು.
`ಸಮಾಜ ಕಲ್ಯಾಣ ಇಲಾಖೆಯವರು ನಡೆಸುತ್ತಿರುವ ತುಮಕೂರಿನ ಪುನರ್ವಸತಿ ಕೇಂದ್ರದಿಂದಲೇ ವಾಹನವನ್ನ ತರಿಸಿ ಇವರನ್ನು ಸ್ಥಳಾಂತರಿಸಲಾಗಿದೆ. ಜಿಲ್ಲೆಯಲ್ಲಿ ಈ ಕಾರ್ಯಾಚರಣೆಯನ್ನು ಹಂತಹಂತವಾಗಿ ಮುಂದುವರಿಸಲಾಗುವುದು~ ಎಂದು ಮಥಾಯಿ ತಿಳಿಸಿದರು.