ಪುದುಚೆರಿ (ಪಿಟಿಐ): ದೇಶದ ವಿವಿಧೆಡೆ ಕೇಳಿಬಂದಿರುವ ಹೊಸ ರಾಜ್ಯಗಳ ರಚನೆ ಬೇಡಿಕೆಯ ಹಿನ್ನೆಲೆಯಲ್ಲಿ ಎರಡನೇ ರಾಜ್ಯಗಳ ಪುನರ್ವಿಂಗಡಣಾ ಆಯೋಗ (ಎಸ್ಆರ್ಸಿ) ರಚಿಸುವಂತೆ ಇಲ್ಲಿನ ಕಾರೈಕಲ್ ಹೋರಾಟ ಸಂಘಟನೆ (ಕೆಎಸ್ಜಿ) ಕೇಂದ್ರವನ್ನು ಒತ್ತಾಯಿಸಿದೆ.
ಪ್ರತ್ಯೇಕ ರಾಜ್ಯ ಸ್ಥಾನಮಾನಕ್ಕಾಗಿ ಹೋರಾಡುತ್ತಿರುವ ಕೊಡಗು, ವಿದರ್ಭ, ಕಾರೈಕಲ್ ಮುಂತಾದ ದಕ್ಷಿಣ ಭಾರತ ಪ್ರಾಂತ್ಯಗಳ ಹೋರಾಟ ಸಂಘಟನೆಗಳು ಎಸ್ಆರ್ಸಿಗಾಗಿ ಜಂಟಿ ಹೇಳಿಕೆ ನೀಡುವುದಾಗಿ ಕೆಎಸ್ಜಿ ಸಂಚಾಲಕ ಎಸ್.ಪಿ. ಸೆಲ್ವಷಣ್ಮುಗಂ ತಿಳಿಸಿದ್ದಾರೆ.
ಪ್ರತ್ಯೇಕ ಕೊಡಗು ರಾಜ್ಯದ ಬೇಡಿಕೆಗೆ ಸಂಬಂಧಿಸಿದಂತೆ ಕೊಡವ ನ್ಯಾಷನಲ್ ಕೌನ್ಸಿಲ್ ಮುಖ್ಯಸ್ಥ ಎನ್.ಯು. ನಾಚಪ್ಪ ಅವರೊಡನೆ ಜಂಟಿ ಹೋರಾಟದ ಬಗ್ಗೆ ಮಾತುಕತೆ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.