ಹಾವೇರಿ: ವಿನಾಶದತ್ತ ಸಾಗುತ್ತಿರುವ ಕೃಷಿ ಉಳಿಸಲು ಹಾಗೂ ರೈತ ವಿರೋಧಿ ಸರ್ಕಾರಗಳ ವಿರುದ್ಧ ಹೋರಾಡಲು ರೈತ ಸಮುದಾಯದ ಪುನರ್ ಸಂಘಟನೆಗೆ ರೈತ ಮುಖಂಡರು ಹಾಗೂ ನೂರಾರು ರೈತರು ಶುಕ್ರವಾರ ಇಲ್ಲಿ ಸಂಕಲ್ಪ ಮಾಡಿದರು.
ಗೋಲಿಬಾರ್ನಲ್ಲಿ ಪ್ರಾಣ ಕಳೆದುಕೊಂಡ ರೈತರ ನಾಲ್ಕನೇ ಹುತಾತ್ಮ ದಿನಾಚರಣೆ ಅಂಗವಾಗಿ ನಗರದ ಬಸ್ ನಿಲ್ದಾಣದ ಬಳಿಯ ವೀರಗಲ್ಲು ಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲೆಯ ರೈತರು ಭ್ರಷ್ಟ ಹಾಗೂ ಸ್ವಾರ್ಥ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಾನಂದ ಗುರುಮಠ, ಎಸ್.ಎನ್.ಬಿದರಿ, ಆರ್.ವಿ.ಕೆಂಚಳ್ಳೇರ ಸೇರಿದಂತೆ ಅನೇಕರು ಮಾತನಾಡಿ, `ರೈತ ಸಂಘಟನೆಗೆ ಗೋಲಿಬಾರ್ನಲ್ಲಿ ಹುತಾತ್ಮರಾದ ಸಿದ್ದಲಿಂಗಪ್ಪ ಚೂರಿ ಹಾಗೂ ಪುಟ್ಟಪ್ಪ ಹೊನ್ನತ್ತಿಯವರು ಸ್ಪೂರ್ತಿಯಾಗಬೇಕು. ರೈತರಿಗಾಗಿಯೇ ಪ್ರಾಣ ತ್ಯಾಗ ಮಾಡಿದ ಈ ಇಬ್ಬರು ಹುತಾತ್ಮರ ಆತ್ಮಕ್ಕೆ ಚಿರಶಾಂತಿ ಸಿಗಬೇಕಾದರೆ, ರೈತರು ಪುನರ್ ಸಂಘಟನೆಯಾಗಿ ಅನ್ಯಾಯ, ಅಧರ್ಮದ ವಿರುದ್ಧ ಹೋರಾಟ ನಡೆಸುವುದು ಅತ್ಯವಶ್ಯವಾಗಿದೆ~ ಎಂದು ಅಭಿಪ್ರಾಯಪಟ್ಟರು.
`ಸ್ವಾರ್ಥ ರಾಜಕಾರಣಿಗಳ ಬೆನ್ನು ಬೀಳಬೇಡಿ, ನಿಮ್ಮ ಮುಗ್ದತೆಯನ್ನು ದಾಳವಾಗಿಟ್ಟುಕೊಂಡು ನಿಮ್ಮನ್ನು ಒಡೆದಾಳುತ್ತಾರಲ್ಲದೇ, ಭೂಮಿಯನ್ನು ಕಸಿದುಕೊಂಡು ನಿಮ್ಮನ್ನು ನಿರ್ಗತಿಕರನ್ನಾಗಿ ಮಾಡಲು ಹಿಂಜರಿಯುವುದಿಲ್ಲ ಎಂದು ರೈತರಿಗೆ ಕಿವಿಮಾತು ಹೇಳಿದ ಮುಖಂಡರು, ಸಂಘಟಿತರಾಗದೇ ನಮಗೂ ಹಾಗೂ ಕೃಷಿಗೂ ಉಳಿಗಾಲವಿಲ್ಲ. ಅದಕ್ಕಾಗಿ ರೈತರು ಜಾಗೃತರಾಗಬೇಕು. ಆಗ ಮಾತ್ರ ಈ ವ್ಯವಸ್ಥೆಗೆ ಹೊಸರೂಪ ಕೊಡಲು ಸಾಧ್ಯವಾಗುತ್ತದೆ~ ಎಂಬ ಅಭಿಪ್ರಾಯಗಳು ಕಾರ್ಯಕ್ರಮದಲ್ಲಿ ಕೇಳಿಬಂದವು.