ಬಳುವಲ ಹಣ್ಣು ಎಂದರೆ ನೆನಪಾಗುವುದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸುಕ್ಷೇತ್ರ ಗೊಡಚಿ. ಬೇರಾವ ಜಾತ್ರೆಯಲ್ಲಿಯೂ ಕಾಣಸಿಗದಷ್ಟು ಬಳುವಲಕಾಯಿ ಹಾಗೂ ಅದರ ಪ್ರಸಾದ ಈ ಗೊಡಚಿ ಜಾತ್ರೆಯ ವಿಶೇಷ. ಹೊಸ್ತಿಲ ಹುಣ್ಣಿಮೆಯಂದು ಆಚರಿಸುವ ಈ ಜಾತ್ರೆ ಈ ಬಾರಿ ಇದೇ 17ರಂದು ಜರುಗಲಿದೆ.
ಗೊಡಚಿ ಜಾತ್ರೆಯ ಇನ್ನೊಂದು ವಿಶೇಷ ಪುರವಂತ ಸಮುದಾಯದವರು (ವೀರಗಾಸಿಗರು). ಭಕ್ತಿ ಉತ್ತುಂಗಕ್ಕೇರಿದ ಸ್ಥಿತಿಯಲ್ಲಿ ಇವರು ಶಸ್ತ್ರಗಳನ್ನು ಗಲ್ಲ ಹಾಗೂ ನಾಲಿಗೆಯಲ್ಲಿ ಚುಚ್ಚಿಕೊಳ್ಳುತ್ತಾರೆ. ಸೂಜಿಯಿಂದ ಶಸ್ತ್ರದ ಜೊತೆಗೆ 105 ಮೀಟರ್ ಉದ್ದ ಶಸ್ತ್ರದಾರವನ್ನು ಒಂದೆಡೆ ಗಲ್ಲಕ್ಕೆ ಚುಚ್ಚಿಕೊಂಡು ಮತ್ತೊಂದೆಡೆಗೆ ತೆಗೆಯುತ್ತಾರೆ. ಈ ಅಚ್ಚರಿ ನೋಡಲು ಜನಸಮೂಹವೇ ನೆರೆಯುತ್ತದೆ.
ರಕ್ತ ಚಿಮ್ಮುವುದಕ್ಕೆ ಸ್ವಲ್ಪ ವಿಭೂತಿ ಲೇಪಿಸಿದರೆ ಸಾಕು, ಗಾಯ ನೋವು ಏನೂ ಇರುವುದಿಲ್ಲ ಎನ್ನುವ ಇವರು ಇವೆಲ್ಲ ವೀರಭದ್ರ ದೇವರ ಆಶಿರ್ವಾದವೇ ಎನ್ನುತ್ತಾರೆ. ಆದರೆ ಕಡುಬಡತನ ಈ ಸಮುದಾಯದವರನ್ನು ಕಿತ್ತು ತಿನ್ನುತ್ತಿದೆ. ಬಡಜನರಿಗೆ ನೀಡಲು ಮಾಸಾಶನವನ್ನು ತಮಗೂ ನೀಡಬೇಕು ಎನ್ನುವುದು ಅವರ ಆಸೆ.