ಗೌರಿಬಿದನೂರು: ಪುರಸಭೆ ಮುಖ್ಯಾಧಿಕಾರಿ ಖಾಜಾ ಮೊಯಿನುದ್ದೀನ್ ಪ್ರಸ್ತುತ ಸ್ಥಳದಿಂದ ಬೇರೆಡೆ ವರ್ಗವಾಗಿದ್ದರೂ ಸ್ಥಳ ನಿಯೋಜನೆವಾಗದ ಕಾರಣ ಮಂಗಳವಾರ ಅವರು ಯಥಾಸ್ಥಿತಿ ಕಾರ್ಯ ನಿರ್ವಹಿಸಿದ ಘಟನೆ ನಡೆಯಿತು. ಪುರಸಭೆಗೆ ನೂತನ ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸೋಮವಾರ ಆಗಮಿಸಿದ್ದ ಎಂ.ಕೆ.ಶ್ರೀನಿವಾಸ ಮೂರ್ತಿಯವರು ಮಂಗಳವಾರ ಬಾರದ ಕಾರಣ ಖಾಜಾ ಮೊಯಿನುದ್ದೀನ್ ಯಥಾರೀತಿ ಕೆಲಸ ಮುಂದುವರಿಸಿದರು.
ಬೇರೆಡೆ ವರ್ಗವಾಗಿರುವ ಖಾಜಾ ಮೊಯಿನುದ್ದೀನ್ ಅವರಿಗೆ ಸ್ಥಳ ನಿಯೋಜನೆಯಾಗಿಲ್ಲ. ಆದ್ದರಿಂದ ಅವರು ಸೋಮವಾರ ತಮ್ಮ ಕಚೇರಿಗೆ ಬೀಗ ಹಾಕಿಕೊಂಡು ಹೊರಹೋಗಿದ್ದರು. ಆದರೆ ಅದೇ ಸಮಯಕ್ಕೆ ಅಲ್ಲಿ ಆಗಮಿಸಿದ ಎಂ.ಕೆ.ಶ್ರೀನಿವಾಸಮೂರ್ತಿಯವರು ಬಾಗಿಲು ಮುಚ್ಚಿರುವುದು ಕಂಡು ವಾಪಸು ಹಿಂದಿರುಗಿದ್ದರು.
ಆದರೆ ಮಂಗಳವಾರ ಬೆಳಿಗ್ಗೆ ಕಚೇರಿಗೆ ಆಗಮಿಸಿದ ಖಾಜಾ ಮೊಯಿನುದ್ದೀನ್ ಅವರು ಬಾಗಿಲು ತೆರೆದು ಯಥಾರೀತಿ ಕೆಲಸ ಮಾಡಿದರು. ಈ ಬೆಳವಣಿಗೆಯನ್ನು ಕಂಡು ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಅಚ್ಚರಿ ವ್ಯಕ್ತಪಡಿಸಿದರು.
ಸಾಮೂಹಿಕ ವಿವಾಹ
ಚಿಂತಾಮಣಿ: ತಾಲ್ಲೂಕಿನ ಕಾಗತಿ ದಿಗೂರಿನ ಗಾಳಿ ಆಂಜನೇಯಸ್ವಾಮಿ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಗಾಳಿ ಆಂಜನೇಯಸ್ವಾಮಿ ನೂತನ ಶಿಲಾ ವಿಗ್ರಹಗಳ ಪ್ರತಿಷ್ಠಾಪನೆ ಹಾಗೂ ಸಾಮೂಹಿಕ ವಿವಾಹಗಳ ಕಾರ್ಯಕ್ರಮ ಮೇ 30ರಂದು ನಡೆಯಲಿವೆ.
ಜೆಡಿಎಸ್ ಮುಖಂಡರಾದ ಜೆ.ಕೆ.ಕೃಷ್ಣಾರೆಡ್ಡಿ, ಕೆ.ವಿ.ಅಮರನಾಥ್ ವಧು ವರರಿಗೆ ಪಂಚೆ, ಅಂಗಿ, ಟವಲ್, ಸೀರೆ, ಮಾಂಗಲ್ಯ ನೀಡುವರು.