ಅರಸೀಕೆರೆ: ಕೊಳವೆಬಾವಿ ಕೊರೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಪುರಸಭಾ ಸದಸ್ಯನ ಮೇಲೆ ಹಲ್ಲೆ ನಡೆಸಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಪಟ್ಟಣದ ಹಾಸನ ರಸ್ತೆ ಬದಿಯ ಮೂರನೇ ವಾರ್ಡಿನಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ.
ಪುರಸಭೆ ವತಿಯಿಂದ ಈ ವಾರ್ಡಿಗೆ ಕೊಳವೆ ಬಾವಿ ಕೊರೆಸಲು ಮುಂದಾದಾಗ ಬಾಬು ಹಾಗೂ ಆವರ ಪುತ್ರ ಇಮ್ರಾನ್ ಮತ್ತು ಅಪ್ಸರ್ ಎಂಬುವರು ಈ ಜಾಗದಲ್ಲಿ ಕೊಳವೆ ಬಾವಿ ಕೊರೆಯಬಾರದು ಎಂದು ಅಡ್ಡಿಪಡಿಸಿದರು. ಆಗ ಪುರಸಭೆ ಸದಸ್ಯ ಸುಬ್ರಮಣ್ಯ ಶ್ಯಾಂ ಹಾಗೂ ಆ ಭಾಗದ ಜನರು ಇಲ್ಲಿಯೇ ಕೊಳವೆ ಬಾವಿ ಕೊರೆಯಬೇಕು ಎಂದಾಗ ಬಾಬು ಮತ್ತು ಆತನ ಪುತ್ರ ಇಮ್ರಾನ್ ಅವರು ಸುಬ್ರಮಣ್ಯ ಶಾಂ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸುಬ್ರಮಣ್ಯ ಶ್ಯಾಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪೊಲೀಸರಿಗೆ ದೂರು ನೀಡಿದ್ದಾರೆ. ವಾರ್ಡಿನ ನಾಗರಿಕರು ಹಲ್ಲೆ ಮಾಡಿದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ನಗರಠಾಣೆ ಮುಂದೆ ಪ್ರತಿಭಟನೆ ನಡೆಸಿದರು.
ನಗರ ಠಾಣೆ ಪೊಲೀಸರು ಬಾಬು ಮತ್ತುಆತನ ಮಗ ಇಮ್ರಾನ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಅಪ್ಸರ್ ತಲೆ ಮರೆಸಿ ಕೊಂಡಿ ್ದದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.