ಗೋಣಿಕೊಪ್ಪಲು: ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದ ವಸತಿ ಗೃಹದಲ್ಲಿ ಹಾಡಹಗಲೇ ನಡೆದ ಪುಷ್ಪ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆ ಕಾರ್ಯಕರ್ತರು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ತಾಲ್ಲೂಕು ಯುವ ಒಕ್ಕೂಟ, ಜಯ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರತಿಭಟನಾಕಾರರು ಶ್ರೀಮಂಗಲ ಮಹಿಳಾ ಮಂಡಲಿ ಅಧ್ಯಕ್ಷೆ ಶೈಲಾ ಸುಬ್ರಮಣಿ ಮಾತನಾಡಿ, ಪುಷ್ಪ ಕೊಲೆಗೆ ಸಂಬಂಧ ಪಟ್ಟಂತೆ ಅಮಾಯಕನನ್ನು ಬಂಧಿಸಲಾಗಿದೆ ಎಂದು ದೂರಿದರು.
ಜಯಕರ್ನಾಟಕ ಜಿಲ್ಲಾ ಸಂಚಾಲಕ ಜಿನ್ನು ನಾಣಯ್ಯ ಮಾತನಾಡಿ ನಾರಾಯಣ ಸ್ವಾಮಿ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದರು.ಮೇಸ್ತ್ರಿ ಕುಂಞಿಮೋನ್ ಮಾತನಾಡಿ, ಬಂಧಿತ ಮಹೇಶ್ ಪುಷ್ಪ ಕೊಲೆಯಾದ ದಿನ ಬೆಳಿಗ್ಗೆ 8.30ರಿಂದ ಸಂಜೆ 4.30ರವರೆಗೆ ನನ್ನೊಂದಿಗೆ ಕೆಲಸ ಮಾಡಿಕೊಂಡಿದ್ದ. ಪೊಲೀಸರ ಪ್ರಕಾರ ಪುಷ್ಪ ಕೊಲೆ ನಡೆದಿರುವುದು ಮಧ್ಯಾಹ್ನ 12 ಗಂಟೆಯಲ್ಲಿ. ವಾಸ್ತವ ಹೀಗಿರುವಾಗ ಆತ ಕೃತ್ಯ ಎಸಗಲು ಹೇಗೆ ಸಾಧ್ಯ ಎಂದರು.
ಸಂಸದ ಎಚ್.ವಿಶ್ವನಾಥ್ ಪರವಾಗಿ ಜಿಪಂ ಸದಸ್ಯೆ ಕೇಚಮಾಡ ಸರಿತಾ ಪೂಣಚ್ಚ ಮನವಿ ಪತ್ರ ಸ್ವೀಕರಿಸಿದರು. ಯುವ ಒಕ್ಕೂಟದ ಅಧ್ಯಕ್ಷ ಗುರುರಾಜರಾವ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬೋಜಮ್ಮ, ವಿರಾಜಪೇಟೆ ನಗರ ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಮಂಡೇಟಿರ ಅನಿಲ್, ಮುತ್ತಪ್ಪ, ಸಣ್ಣುವಂಡ ನಂದನು ಮುತ್ತಣ್ಣ, ರೀನಾ ರಾಜೀವ್, ಬೀನಾ, ಪ್ರವಿ ಮೊಣ್ಣಪ್ಪ, ಚೇಂದಿರ ಪ್ರಭಾ ನಾಣಯ್ಯ, ಸುಮಿತ್ರಾ, ರುಕ್ಮಿಣಿ ಇದ್ದರು.