ದೇವನಹಳ್ಳಿ: ಪುಷ್ಪೋದ್ಯಮದ ಪುನಶ್ಚೇತನ ಯೋಜನೆಯಡಿ ಎರಡು ಹೆಕ್ಟೇರ್ಗೆ ಸೀಮಿತವಾಗಿರುವ ಅರ್ಹ ಫಲಾನುಭವಿಗಳಿಗೆ ಸಹಾಯ ಧನ ನೀಡುವುದಕ್ಕಾಗಿ ಅರ್ಜಿ ಸಲ್ಲಿಸಲು ಫೆಬ್ರವರಿ 25ರಂದು ಕೊನೆಯ ದಿನವಾಗಿದೆ.
ಸಂರಕ್ಷಿತ ಕೃಷಿಯಲ್ಲಿ ಗುಲಾಬಿ, ಅಂಥೂರಿಯಂ, ಜರ್ಬೆರಾ, ಸೇವಂತಿಗೆ, ಕಾರ್ನೇಷನ್ ಪುಷ್ಪಗಳನ್ನು ಸತತ ಮೂರು ವರ್ಷ ಸ್ವಂತ ಘಟಕ ಹೊಂದಿ ಸಸ್ಯಗಳ ಪಾಲನೆ ಮಾಡಿರಬೇಕು. ಪ್ರಸಕ್ತ ಸಾಲಿನಲ್ಲಿ ಪಾಲಿಹಾಳೆ (ಪ್ಲಾಸ್ಟಿಕ್ ಹೊದಿಕೆ) ಯನ್ನು ಬದಲಾವಣೆ ಮಾಡಿಕೊಳ್ಳುವವರಿಗೆ ಸಂರಕ್ಷಿತ ಸಸಿಯ ನಿರ್ವಹಣೆಗೆ ಚದರಡಿಗೆ 50ರೂಪಾಯಿ ಮತ್ತು ಪಾಲಿಹಾಳೆಗೆ 30ರೂಗಳನ್ನು ಸಹಾಯ ಧನವನ್ನಾಗಿ ನೀಡಲಾಗುವುದು.
ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಆದ್ಯತೆ ಮೇರೆಗೆ ಪರಿಗಣಿಸಲಾಗುವುದು. ಬೆಂಗಳೂರು ನಗರ ಸೇರಿದಂತೆ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ತಾಲ್ಲೂಕಿನ ಪುಷ್ಪ ಕೃಷಿಕರು ಸಂಬಂಧಪಟ್ಟ ತಾಲ್ಲೂಕು ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತಾಲ್ಲೂಕು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.