ದೇವನಹಳ್ಳಿ: `ಪ್ರಕೃತಿಯ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ನಿಲ್ಲುವವರೆಗೂ ಪರಿಸರ ಸಂರಕ್ಷಣೆ ಸಾಧ್ಯವಿಲ್ಲ~ ಎಂದು ಶೇಷಾದ್ರಿಪುರಂ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಬಿ.ಎಂ.ಪಾರ್ಥಸಾರಥಿ ತಿಳಿಸಿದರು.
ತಾಲ್ಲೂಕಿನ ಬೆಟ್ಟಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬೆಂಗಳೂರು ಶೇಷಾದ್ರಿಪುರಂ ಪದವಿ ಪೂರ್ವಕಾಲೇಜುವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನಾ ಘಟಕ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. `ಪ್ರಕೃತಿಯ ಕೊಡುಗೆಗಳಾದ ವಾಯು, ಜಲ, ವನ ವನ್ಯ ಜೀವಿಗಳು ಅಳಿವಿನಂಚಿನಲ್ಲಿದ್ದು ಮನಷ್ಯ ತನ್ನ ಸ್ವಾರ್ಥಕ್ಕಾಗಿ ಇತಿಮಿತಿ ಇಲ್ಲದೆ ಬಳಕೆ ಮಾಡುತ್ತಿದ್ದಾನೆ~ ಎಂದು ವಿಷಾದಿಸಿದರು.
`ಶಿಕ್ಷಣದಿಂದ ಅರಿವು ಪಡೆದ ಯುವಜನಾಂಗ ಮುಂದಿನ ಪೀಳಿಗೆಗಾಗಿ ಹಸಿರು ಕ್ರಾಂತಿಯ ಹರಿಕಾರಕರಾಗಬೇಕು~ ಎಂದರು.
ಹಿರಿಯ ವಕೀಲ ಶ್ರಿನಿವಾಸಮೂರ್ತಿ ಮಾತನಾಡಿ, `ವಿದ್ಯಾರ್ಥಿಗಳು ಶಿಸ್ತು ಸನ್ನಡತೆಯ ಶಿಕ್ಷಣದೊಂದಿಗೆ ಸಾಮಾಜಿಕ ಕಾಳಜಿಯುಳ್ಳ ಸ್ವಚ್ಛತೆ ಪರಿಸರ ರಕ್ಷಣೆಗೆ ಮುಂದಾಗಬೇಕು. ಶಿಬಿರದಲ್ಲಿ ಕಲಿತ ಪಾಠ ಶಿಕ್ಷಣದೊಂದಿಗೆ ಜೀವನದ ಅಡಿಪಾಯವಾಗಬೇಕು~ ಎಂದರು.
ತುರುವೆಕೆರೆ ಬದರಿಕಾಶ್ರಮದ ಶ್ರಿಓಂಕಾರನಂದ ಮಹರಾಜ್ ಶಿಬಿರದ ಸಾನಿಧ್ಯವಹಿಸಿದ್ದರು. ಶೇಷಾದ್ರಿಪುರಂ ಕಾಲೇಜು ಪ್ರಾಂಶುಪಾಲ ಎಂ.ಆರ್.ಶ್ರಿನಿವಾಸ್ ಅಧ್ಯಕ್ಷತೆವಹಿಸಿದ್ದರು. ಕಾಲೇಜಿನ ಧರ್ಮದರ್ಶಿ ಕೃಷ್ಣಸ್ವಾಮಿ, ಸಂಜೆ ಕಾಲೇಜು ಛೇರ್ಮೆನ್ ವೀರಭದ್ರಪ್ಪ, ಪ್ರಾಂಶುಪಾಲ ಮಾಹಾಲಕ್ಷ್ಮಿ, ಉಪ ಪ್ರಾಂಶುಪಾಲ ಸುರೇಶ್, ಕನ್ನಡ ಉಪನ್ಯಾಸಕ ಎಸ್.ರಾಮಲಿಂಗೇಗೌಡ, ಜಿಲ್ಲಾ ಕ.ಸಾ.ಪ ಖಜಾಂಚಿ ಯಾ.ಚಿ.ದೊಡ್ಡಯ್ಯ, ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮಾಧಿಕಾರಿ ಟಿ.ಎಸ್. ಲೋಕೇಶ್, ಸ.ಹಿ.ಪ್ರಾ ಪಾಠ ಶಾಲೆ ಮುಖ್ಯ ಶಿಕ್ಷಕ ಎಂ. ಮಹೆಶ್ವರಪ್ಪ, ವಕೀಲ ಜೆ.ಎಂ.ಮುನಿರಾಜು, ಎಸ್.ಎನ್ ವೆಂಕಟೇಶ್ ಇದ್ದರು.