ಚಿಕ್ಕಮಗಳೂರು: ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಹೆಚ್ಚಿಸಿರುವುದನ್ನು ವಿರೋಧಿಸಿ ಬಿಜೆಪಿ ಕರೆ ನೀಡಿರುವ ಭಾರತ ಬಂದ್ ಹಿನ್ನಲೆಯಲ್ಲಿ ಕಾರ್ಯಕರ್ತರು ಗುರುವಾರ ನಗರ ಬಂದ್ಗೆ ಕರೆ ನೀಡಿದ್ದಾರೆ.
ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ನಗರ ಬಂದ್ಗೊಳಿಸಲು ತೀರ್ಮಾನ ಕೈಗೊಂಡಿದೆ.
ನಗರದ ಆರು ಶಕ್ತಿಕೇಂದ್ರಗಳಲ್ಲಿ ಆಯಾ ಭಾಗದ ಕಾರ್ಯಕರ್ತರು ನಗರ ಬಂದ್ಗೊಳಿಸುವರು. ನಂತರ 12.30 ಕ್ಕೆ ಹಳೇ ತಾಲ್ಲೂಕು ಕಚೇರಿಯಿಂದ ಮೆರವಣಿಗೆ ಹೊರಟು ಮುಖ್ಯ ರಸ್ತೆಯಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವರು.
ಪ್ರತಿಕೃತಿದಹನ: ಕೇಂದ್ರ ಸರ್ಕಾರ ಹೆಚ್ಚಳಗೊಳಿಸಿರುವ ಪೆಟ್ರೋಲ್ ಬೆಲೆ ಹೆಚ್ಚಳವನ್ನು ವಿರೋಧಿಸಿ ಎಡಪಕ್ಷಗಳು ಕರೆ ನೀಡಿರುವ ಅಖಿಲ ಭಾರತ ಪ್ರತಿಭಟನಾ ದಿನದ ಅಂಗವಾಗಿ ಇದೇ 31 ರಂದು ಸಿ.ಪಿ.ಐ. ಕಾರ್ಯಕರ್ತರು ನಗರದಲ್ಲಿ ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿ ಪ್ರತಿಭಟಿಸಲಿದ್ದಾರೆ.
ಸಂತೆ ಮೈದಾನದ ಬಳಿ ಇರುವ ಪಕ್ಷದ ಜಿಲ್ಲಾ ಕಚೇರಿಯಿಂದ ಬೆಳಿಗ್ಗೆ ಮೆರವಣಿಗೆ ಹೊರಟು ಕೆ.ಎಂ. ರಸ್ತೆಯ ಮೂಲಕ ಹನುಮಂತಪ್ಪ ವೃತ್ತ ತಲುಪಿ ಅಲ್ಲಿ ಕೇಂದ್ರ ಸರ್ಕಾರದ ಪ್ರತಿಕೃತಿಯನ್ನು ಸುಡಲಾಗುವುದು ಎಂದು ಪಕ್ಷದ ರಾಜ್ಯ ಮಂಡಳಿ ಸದಸ್ಯ ಬಿ. ಅಮ್ಜದ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಆರ್ಥಿಕ ನೀತಿ ಜನವಿರೋಧಿಯಾಗಿದೆ. ಪೆಟ್ರೋಲ್ ದರ ಹೆಚ್ಚಳವಾಗಿದ್ದರಿಂದ ದಿನ ನಿತ್ಯವಸ್ತುಗಳ ಬೆಲೆಗಳು ದುಬಾರಿಯಾಗಲಿವೆ. ಇದರಿಂದ ಬಡವರು ಬದುಕು ಸಾಗಿಸಲು ಕಷ್ಟಪಡಬೇಕಾಗಿದೆ ಎಂದಿದ್ದಾರೆ.
ಪೆಟ್ರೋಲ್ ಬೆಲೆ ಹೆಚ್ಚಳ ಮತ್ತು ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ವಿರೋಧ ಹಮ್ಮಿ ಕೊಂಡಿರುವ ಪ್ರತಿಭಟನೆಗೆ ನಾಗರೀಕರು ಸ್ವಯಂ ಪ್ರೇರಿತವಾಗಿ ಭಾಗವಹಿಸು ವಂತೆ ಕೋರಿದ್ದಾರೆ.