ನವದೆಹಲಿ (ಪಿಟಿಐ, ಐಎಎನ್ಎಸ್): ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ದೇಶದಾದ್ಯಂತ ತೀವ್ರ ಆಕ್ರೋಶ, ಪ್ರತಿಭಟನೆ ವ್ಯಕ್ತವಾದರೂ, ದರ ಇಳಿಸುವ ಬಗ್ಗೆ ಕೇಂದ್ರ ಸರ್ಕಾರ ಭರವಸೆ ನೀಡಿಲ್ಲ.
ಶುಕ್ರವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಪೆಟ್ರೋಲಿಯಂ ಸಚಿವ ಜೈಪಾಲ್ ರೆಡ್ಡಿ, `ಬೆಲೆ ಇಳಿಕೆ ಸದ್ಯಕ್ಕಿಲ್ಲ~ ಎಂದು ಸ್ಪಷ್ಟಪಡಿಸಿದರು.
`ಸರ್ಕಾರವು ಬೆಲೆ ಏರಿಕೆ ನಿರ್ಧಾರ ಹಿಂತೆಗೆದುಕೊಳ್ಳುವುದಕ್ಕೂ ಮುನ್ನ, ಕೆಲವು ದಿನಗಳ ಕಾಲ ಪರಿಸ್ಥಿತಿ ಅವಲೋಕಿಸಲಿದೆ. ಬೆಲೆ ಏರಿಕೆ ನಿರ್ಧಾರ ಅತ್ಯಂತ ಕಠೋರ ಮತ್ತು ಅಹಿತಕರವಾಗಿದೆ. ತೈಲ ಮಾರುಕಟ್ಟೆ ಕಂಪೆನಿಗಳ ಬೇಡಿಕೆಯ ಮೇರೆಗೆ ಈ ಹೆಚ್ಚಳ ಮಾಡಲಾಗಿದೆ~ ಎಂದು ಸಮಜಾಯಿಸಿ ನೀಡಿದರು.
`ತೈಲ ಕಂಪೆನಿಗಳು ಕಚ್ಚಾ ತೈಲ ಬೆಲೆ ಹೆಚ್ಚಳ ಮತ್ತು ಪ್ರಸ್ತುತ ಸ್ಥಿರವಿಲ್ಲದ ರೂಪಾಯಿ ಮೌಲ್ಯ ಕುಸಿತದ ದ್ವಿಮುಖ ಪರಿಸ್ಥಿತಿ ಜೊತೆ ವ್ಯವಹರಿಸಬೇಕಿದೆ~ ಎಂದೂ ಹೇಳಿದರು.
ಕಾಂಗ್ರೆಸ್ ಒತ್ತಡ: ಈ ಮಧ್ಯೆ, ಪೆಟ್ರೋಲ್ ಬೆಲೆ ಏರಿಕೆಯಿಂದ ಪ್ರತಿಪಕ್ಷಗಳು ಮತ್ತು ಮಿತ್ರಪಕ್ಷಗಳಿಂದ ದೂರವಾಗಿ ಏಕಾಂಗಿ ಆಗಿರುವ ಕಾಂಗ್ರೆಸ್ ಪಕ್ಷದ ಪ್ರಮುಖರು ಶುಕ್ರವಾರ ಸಭೆ ಸೇರಿ, ಜನರಿಗೆ ಹೊರೆ ಯಾಗಿರುವ ಈ ನಿರ್ಧಾರ ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ತೀರ್ಮಾನದ ವಿರುದ್ಧ ಯುಪಿಎ ಮಿತ್ರಪಕ್ಷಗಳಾದ ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ ಪ್ರತಿಭಟನೆ ನಡೆಸಲು ಮುಂದಾಗಿರುವುದರಿಂದ ಹಾಗೂ ಸಮಾಜವಾದಿ ಪಕ್ಷವು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವುದರಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸುಮಾರು ಎರಡು ತಾಸು ಪ್ರಧಾನಿ ಮನಮೋಹನ್ ಸಿಂಗ್, ಹಿರಿಯ ಸಚಿವರು,ಉನ್ನತ ನಾಯಕರ ಜೊತೆ ಚರ್ಚೆ ನಡೆಸಿದರು.
ಈ ಸಭೆಯ ನಂತರ ಎಐಸಿಸಿ ವಕ್ತಾರ ಮನೀಶ್ ತಿವಾರಿ ಮುಂದಿನ ಕೆಲವು ದಿನಗಳಲ್ಲಿ ಬೆಲೆ ಏರಿಕೆಯನ್ನು ಪರಿಷ್ಕರಿಸುವ ಸಾಧ್ಯತೆ ಇರುವ ಸುಳಿವು ನೀಡಿದ್ದಾರೆ.