ಬದಿಯಡ್ಕ: `ಇತಿಹಾಸದಲ್ಲೇ ಭಕ್ತಿ, ಸಮೃದ್ಧಿ ಮತ್ತು ಶಕ್ತಿಯ ಪ್ರತೀಕಗಳಲ್ಲಿ ಪುದ್ವಾರ್ ಹಬ್ಬವೂ ಪ್ರಮುಖ. ಹೊಸ ಅಕ್ಕಿ ಊಟದ ಈ ಆಚರಣೆಯು ಮೂಲೆಗುಂಪಾಗಬಾರದು. ಅದನ್ನು ಮುಂದಿನ ತಲೆಮಾರಿಗೆ ದಾಟಿಸಬೇಕಾದ ಜವಾಬ್ದಾರಿ ಯುವಜನಾಂಗಕ್ಕೆ ಇದೆ~ ಎಂದು ಬಜಕೂಡ್ಲಿನ ಕುಟ್ಟಿ ನಾಯ್ಕ ಹೇಳಿದರು.
ಅವರು ಮಂಗಳವಾರ ಪೆರ್ಲದ ಆಯುಷ್ ಸಭಾಂಗಣದಲ್ಲಿ ನೇಸರ್ ಕಲಾವಿದರ ಆಶ್ರಯದಲ್ಲಿ ನಡೆದ `ಪುದ್ವಾರ್ ಪರ್ವೊ~ ಕಾರ್ಯಕ್ರಮವನ್ನು ಭತ್ತದ ಕಾಳುಗಳನ್ನು ಸುಲಿದು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯ ಎಂ.ಎಸ್ ಶಂಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಕೇರಳ ಪಾರ್ತಿಸುಬ್ಬ ಕಲಾ ಕ್ಷೇತ್ರದ ಸದಸ್ಯ ಶ್ರೀನಿವಾಸ ಆಳ್ವ, ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಇದ್ದರು.
ಮೀಯಪದವು ಹೈಯರ್ ಸೆಕೆಂಡರಿ ಶಾಲಾ ಉಪನ್ಯಾಸಕ ಲೋಕೇಶ್ ಚೂರಿತ್ತಡ್ಕ ಪುದ್ವಾರ್ ಆಚರಣೆಯ ಬಗ್ಗೆ ಮಾಹಿತಿ ನೀಡಿದರು. ನಂತರ ನಡೆದ ಸಂವಾದದಲ್ಲಿ ಸಾಂತಪದವು ಉದಯ ಮಾಸ್ತರ್, ಪುಟ್ಟಪ್ಪ ಖಂಡಿಗೆ, ಹರೀಶ್ ಪೆರ್ಲ, ಸುರೇಂದ್ರ ಬಜಕೂಡ್ಲು, ವನಜಾಕ್ಷಿ ಚಂಬ್ರಕಾನ, ಸುರೇಶ್ ಪುತ್ತೂರು, ಜನಾರ್ದನ ಬೊಟ್ಟಾರಿ, ಮಣಿರಾಜ್ ವಾಂತಿಚ್ಚಾಲ್ ಇದ್ದರು. ನಂತರ ತುಳು ಭಾವಗೀತೆ ಮತ್ತು ತುಳು ಕವಿಗೋಷ್ಠಿ ನಡೆಯಿತು. ರಮೇಶ್ ಕುರೆಡ್ಕ ಸ್ವಾಗತಿಸಿದರು. ಶ್ರೀಧರ ಪುಣಿಯೂರು ವಂದಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರ್ವಹಿಸಿದರು.