ಬದಿಯಡ್ಕ: ಯಕ್ಷಗಾನ ಅರ್ಥಗಾರಿಕೆ, ಸಾಹಿತ್ಯ, ನಾಟಕ, ಸಾರ್ವಜನಿಕ ಸೇವೆ, ಅಧ್ಯಾಪನ ಮೊದಲಾದ ಅನೇಕ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿದ್ದ ಹಿರಿಯ ವಿದ್ವಾಂಸ ಪೆರ್ಲ ಕೃಷ್ಣ ಭಟ್ (90) ಸೋಮವಾರ ಸಂಜೆ ಅನಾರೋಗ್ಯದಿಂದ ಪೆರ್ಲದ ತಮ್ಮ ಮನೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರಿದ್ದಾರೆ.
ಹಿಂದಿ ಅಧ್ಯಾಪಕರಾಗಿ 29 ವರ್ಷ ಸೇವೆ ಸಲ್ಲಿಸಿದ ಕೃಷ್ಣ ಭಟ್ಟರು, ಯಕ್ಷಗಾನ ಅರ್ಥಗಾರಿಕೆಯಲ್ಲಿ ಕರಾವಳಿ ಭಾಗದಲ್ಲಿ ಪ್ರಸಿದ್ಧರು. ಸಾವಿರಾರು ಯಕ್ಷಗಾನ ತಾಳಮದ್ದಳೆಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ ಅವರ ಕೃಷ್ಣ, ರಾಮ, ಅತಿಕಾಯ, ವಿಭೀಷಣ, ಬೃಹನ್ನಳೆ ಪಾತ್ರಗಳು ಜನಪ್ರಿಯವಾಗಿದ್ದವು.
ಅವರು 15ಕ್ಕೂ ಅಧಿಕ ಸಾಹಿತ್ಯ ಕೃತಿಗಳನ್ನು ರಚಿಸಿದ್ದು, ಈ ಪೈಕಿ ಐದು ಕಥೆಗಳು ಕೇರಳದಲ್ಲಿ ಪಠ್ಯಗಳಾಗಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಕರ್ನಾಟಕ ಮತ್ತು ಕೇರಳದ ಹಲವು ಪ್ರಶಸ್ತಿಗಳಿಗೆ ಅವರು ಪಾತ್ರರಾಗಿದ್ದಾರೆ.