ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಜಾವರ ಮಠದಿಂದ ಹುಬ್ಬಳ್ಳಿಯಲ್ಲಿ ವಿದ್ಯಾಸಂಸ್ಥೆ

Last Updated 19 ಫೆಬ್ರುವರಿ 2011, 6:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನಗರದಲ್ಲಿ ಶೀಘ್ರವೇ ಪೇಜಾವರ ಮಠದಿಂದ ಪಿಯುಸಿವರೆಗೆ ವಸತಿಯುಕ್ತ ವಿದ್ಯಾಸಂಸ್ಥೆ ಆರಂಭಿಸಲಾಗುವುದು’ ಎಂದು ಮಠದ ಪೀಠಾಧಿಪತಿಗಳಾದ ವಿಶ್ವೇಶತೀರ್ಥ ಸ್ವಾಮೀಜಿ ಪ್ರಕಟಿಸಿದರು. ತೊರವಿಗಲ್ಲಿ ರಾಘವೇಂದ್ರ ಸ್ವಾಮಿಗಳ ಮಠದ ನವೀಕೃತಗೊಂಡ ಕಲ್ಯಾಣ ಮಂಟಪ ‘ಪರಿಮಳ ಸದನ’ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ದೇವಾಲಯಗಳು ಭಗವಂತನ ಮಂದಿರವಾದರೆ, ಕಲ್ಯಾಣ ಮಂಟಪಗಳು ಭಕ್ತರ ಮಂದಿರಗಳಾಗಿವೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲು ಕಲ್ಯಾಣ ಮಂಟಪಗಳು ಅತ್ಯಗತ್ಯ’ ಎಂದು ಅವರು ಹೇಳಿದರು. ‘ರಾಘವೇಂದ್ರ ಸ್ವಾಮಿಗಳು ಎಲ್ಲರ ಮೇಲೆ ಕರುಣೆ ತೋರುತ್ತಾರೆ. ರಾಯರ ಮಠಗಳು ಸಾಮಾಜಿಕ ಕೇಂದ್ರಗಳಾಗಿವೆ. ಅಲ್ಲಿ ಧರ್ಮ ಕಾರ್ಯಗಳು ನಿರಂತರವಾಗಿ ನಡೆಯಬೇಕು’ ಎಂದರು.

‘ಹುಬ್ಬಳ್ಳಿಯಲ್ಲಿ ರಾಯರ ಮಠವೆಂದರೆ ನಮಗೆ ಮೊದಲು  ನೆನಪಾಗುವುದೇ ತೊರವಿಗಲ್ಲಿ ಮಠ.  ನಾವು ಚಿಕ್ಕವರಿದ್ದಾಗ ಪ್ರತಿ ಗುರುವಾರ
ತಪ್ಪದೇ ಮಠಕ್ಕೆ ಬರುತ್ತಿದ್ದೆವು. ಇದೊಂದು ಜಾಗೃತ ಸ್ಥಳವಾಗಿದೆ’ ಎಂದು ಸಚಿವ ಜಗದೀಶ ಶೆಟ್ಟರ ಹೇಳಿದರು. ‘ಪೇಜಾವರ ಸ್ವಾಮೀಜಿ ಹಿಂದೂ ಸಮಾಜದ ಒಗ್ಗಟ್ಟಿಗೆ ಶ್ರಮಿಸುತ್ತಿದ್ದು, ಅವರೊಬ್ಬ ರಾಷ್ಟ್ರ ಸಂತರಾಗಿದ್ದಾರೆ. ಸಮಾಜವನ್ನು ಒಟ್ಟಾಗಿ ಮುನ್ನಡೆಸಿಕೊಂಡು ಹೋಗುವುದು ಅವರ ಗುರಿಯಾಗಿದೆ’ ಎಂದು ಸಂಸದ ಪ್ರಹ್ಲಾದ ಜೋಶಿ ತಿಳಿಸಿದರು.

ಮೇಯರ್ ವೆಂಕಟೇಶ ಮೇಸ್ತ್ರಿ, ಪಾಲಿಕೆ ಸದಸ್ಯರಾದ ಸುಧೀಂದ್ರ ಸರಾಫ, ಉದ್ಯಮಿ ಶ್ರೀಕಾಂತ ಕೆಮ್ತೂರ, ಎಸಿಪಿ ಶ್ರೀನಾಥ ಜೋಶಿ, ಮಠದ ಮುಖ್ಯಸ್ಥರಾದ ದಯಾನಂದ ಯಾರ್ದಿ, ಕೆ.ಎನ್. ಮಿಟ್ಟಿಮನಿ ಮತ್ತಿತರರು ವೇದಿಕೆ ಮೇಲಿದ್ದರು. ಕಲ್ಯಾಣ ಮಂಟಪದ ವಿನ್ಯಾಸಗಾರರಾದ ಪ್ರಮೋದ ಮನೋಳಿ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು. ಪಂ. ಶ್ರೀ ಹರಿಯಾಚಾರ್ಯ ವಾಳ್ವೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT