ನವದೆಹಲಿ (ಪಿಟಿಐ):ಹಣದುಬ್ಬರ ಹೆಚ್ಚಳ ಮತ್ತು ಈಜಿಪ್ಟ್ನಲ್ಲಿನ ರಾಜಕೀಯ ಅರಾಜಕತೆ ಕಾರಣಗಳಿಂದಾಗಿ ಮುಂಬರುವ ದಿನಗಳಲ್ಲಿಯೂ ಷೇರುಪೇಟೆಯಲ್ಲಿ ಕುಸಿತ ಮುಂದುವರೆಯುವ ನಿರೀಕ್ಷೆ ಇದೆ.ಜನವರಿ ತಿಂಗಳಲ್ಲಿ ಶೇ 10.6ರಷ್ಟು ಕುಸಿತ ದಾಖಲಿಸಿದ್ದ ಸಂವೇದಿ ಸೂಚ್ಯಂಕವು, ಫೆಬ್ರುವರಿ ತಿಂಗಳ ಮೊದಲ ವಾರದಲ್ಲಿಯೂ ಕೆಳಮುಖವಾಗಿ ಚಲಿಸುವ ಪ್ರವೃತ್ತಿ ಮುಂದುವರೆಸಿದೆ.ಹಣದುಬ್ಬರವು ಆರ್ಥಿಕ ವೃದ್ಧಿಗೆ ಗಂಭೀರ ಸ್ವರೂಪದ ಬೆದರಿಕೆ ಒಡ್ಡಿದೆ ಎನ್ನುವ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆಯು ಹೂಡಿಕೆದಾರರ ಉತ್ಸಾಹ ಉಡುಗಿಸಿದೆ ಎಂದು ಮೋತಿಲಾಲ್ ಓಸ್ವಾಲ್ ಸೆಕ್ಯುರಿಟೀಸ್ ಅಸೋಸಿಯೇಟ್ಸ್ನ ನಿರ್ದೇಶಕ ಮನೀಷ್ ಷಾ ಅಭಿಪ್ರಾಯಪಟ್ಟಿದ್ದಾರೆ.ಹೂಡಿಕೆದಾರರಲ್ಲಿ ಖರೀದಿ ಆಸಕ್ತಿ ಇಲ್ಲದಿರುವುದು ಮತ್ತು ಪೇಟೆಯಲ್ಲಿ ಉತ್ಸಾಹ ತುಂಬುವ ಸಕಾರಾತ್ಮಕ ವಿದ್ಯಮಾನಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಪೇಟೆಯಲ್ಲಿ ಷೇರುಗಳ ಮಾರಾಟ ಒತ್ತಡ ಇನ್ನಷ್ಟು ದಿನ ಮುಂದುವರೆಯಲಿದೆ ಎಂದು ಬಹುವಾಗಿ ನಿರೀಕ್ಷಿಸಲಾಗಿದೆ.
ಈಜಿಪ್ಟ್ನಲ್ಲಿನ ಬೆಳವಣಿಗೆ ಹಿನ್ನೆಲೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳಗೊಳ್ಳುವ ಮತ್ತು ರಾಜಕೀಯ ಬಿಕ್ಕಟ್ಟು ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸುವ ಸಾಧ್ಯತೆಗಳು, ಕಡಿಮೆ ಬೆಲೆ ಮಟ್ಟದಲ್ಲಿಯೂ ಷೇರುಗಳನ್ನು ಮಾರಾಟ ಮಾಡಲು ಉತ್ತೇಜಿಸುವ ಸಾಧ್ಯತೆಗಳು ಹೆಚ್ಚಿಗೆ ಇವೆ ಎಂದು ಮಾರುಕಟ್ಟೆ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಶೀಘ್ರದಲ್ಲಿ ಪ್ರಕಟಗೊಳ್ಳಲಿರುವ ಡಿಸೆಂಬರ್ ತಿಂಗಳ ಕೈಗಾರಿಕಾ ವೃದ್ಧಿ ದರವು ಪೇಟೆಗೆ ಕೊಂಚ ಬಲ ತುಂಬುವ ನಿರೀಕ್ಷೆ ಇದೆ.