ಉಡುಪಿ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪರವಾಗಿ ಜಾಹೀರಾತು ಪ್ರಸಾರ ಮಾಡುವ ಸ್ಥಳೀಯ ಕೇಬಲ್ ವಾಹಿನಿಗಳು ಜಾಹೀರಾತು ತಯಾರಿಕೆ ಮತ್ತು ಪ್ರಸಾರಕ್ಕೆ ತಗಲುವ ನಿಖರವಾದ ವೆಚ್ಚವನ್ನು ತಿಳಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ಮುದ್ದುಮೋಹನ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ಮಾಧ್ಯಮ ದೃಢೀಕರಣ ಮತ್ತು ಮೇಲುಸ್ತುವಾರಿ ಸಮಿತಿ (ಎಂಸಿಎಂಸಿ) ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಎಂಸಿಎಂಸಿ ಸಮಿತಿಯ ಅನುಮೋದನೆಗೆ ಸಲ್ಲಿಸಲಾಗುತ್ತಿರುವ ಅರ್ಜಿಗಳಲ್ಲಿ ಜಾಹೀರಾತು ಪಡೆಯವ ವಾಹಿನಿಗಳು ನಮೂದಿಸಿರುವ ದರಗಳು ನಿಜವಾದ ಮಾರುಕಟ್ಟೆ ದರಕ್ಕಿಂತ ಬಹಳ ಕಡಿಮೆಯಿದೆ.
ಜಾಹೀರಾತು ನಿರ್ಮಾಣ ಮತ್ತು ಪ್ರಸಾರದ ವೆಚ್ಚಗಳು ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಪರಿಗಣೆನೆಯಾಗುವುದರಿಂದ ಸರಿಯಾದ ದರವನ್ನು ನಮೂದಿಸಿ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು. ಪತ್ರಿಕೆಯಲ್ಲಿ ಬರುವ ಪೇಯ್ಡ್ ನ್ಯೂಸ್ಗಳನ್ನು ಸಮಿತಿಯ ಸದಸ್ಯರು ಪರಿಶೀಲಿಸುತ್ತಿದ್ದು, ಪೇಯ್ಡ್ ನ್ಯೂಸ್ ವರದಿ ಕಂಡುಬಂದಲ್ಲಿ, ವರದಿಯ ವೆಚ್ವವನ್ನು ಸಮಿತಿಯು ನಿರ್ಧರಿಸಿ, ಅಭ್ಯರ್ಥಿಯ ವೆಚ್ಚಕ್ಕೆ ಸೇರಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಕನಗವಲ್ಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ, ಸಹಾಯಕ ಚುನಾವಣಾ ಲೆಕ್ಕ ವೀಕ್ಷಣಾಧಿಕಾರಿ ಬಿ. ತಿಮ್ಮಪ್ಪ, ಹಿರಿಯ ಪತ್ರಕರ್ತ ಮಾಧವಾಚಾರ್ಯ, ಮಣಿಪಾಲ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ವರದೇಶ್ ಹಿರೇಗಂಗೆ, ನಗರ ಗ್ರಂಥಾಲಯಾಧಿಕಾರಿ ನಳಿನಿ ಉಪಸ್ಥಿತರಿದ್ದರು.