ಕುಮಟಾ: `ವಿವಿಧ ಕಾರಣಗಳಿಂದಾಗಿ ಬೆಳವಣಿಗೆ ಕುಂಠಿತವಾಗುತ್ತಿರುವ ಸಹಕಾರಿ ಸಂಘಗಳು ಆಧುನಿಕತೆಯನ್ನು ಮೈಗೂಡಿಸಿಕೊಂಡು ಸ್ಪರ್ಧಾತ್ಮಕ ಪೈಪೋಟಿ ಎದುರಿಸಬೇಕಾಗಿದೆ` ಎಂದು ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಡಿ.ಎಸ್.ಭಾಗ್ವತ ಹೇಳಿದರು.
ಪಟ್ಟಣದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ವತಿಯಿಂದ ಕರಾವಳಿಯ ನಾಲ್ಕು ತಾಲ್ಲೂಕುಗಳ ಸಹಕಾರಿ ಸಂಘಗಳ ಅಧ್ಯಕ್ಷರು ಹಾಗೂ ವ್ಯವಸ್ಥಾಪಕರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
`ಸಮಾಜದಲ್ಲಿ ಬಡವರ ಬಂಧುವಿನಂತೆ ಕೆಲಸ ಮಾಡುತ್ತಿರುವ ಸಹಕಾರಿ ಸಂಘಗಳು, ರೈತರಿಗೆ ಹಾಗೂ ಕೆಳಸ್ತರದ ಜನರಿಗೆ ಸುಲಭ ಸಾಲ ಸೌಲಭ್ಯ ನೀಡುವ ಮೂಲಕ ಅವರ ಬದುಕಿನ ಭಾಗವೇ ಆಗಿದೆ' ಎಂದರು.
ನಿರ್ದೇಶಕ ಎನ್.ಕೆ.ಶಾನಭಾಗ ಮಾತನಾಡಿ ` ಸಹಕಾರಿ ತತ್ವದಲ್ಲಿ ನಂಬಿಕೆಯುಳ್ಳವರು ಸಹಕಾರಿ ಸಂಸ್ಥೆಯಲ್ಲಿ ಪಾಲ್ಗೊಂಡರೆ ಆ ಕ್ಷೇತ್ರ ಇನ್ನೂ ಚೆನ್ನಾಗಿ ಬೆಳೆಯಲು ಸಾಧ್ಯ' ಎಂದರು.
ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಎನ್.ಎ.ಶೇಟ್, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಜ್ಞಾನದಾ ಶಾನಭಾಗ, ಮಾರುತಿ ನಾಯಕ, ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಎಚ್.ವಿ.ನಾಯಕ, ಎನ್.ಎ.ಶೆಟ್ ಪಾಲ್ಗೊಂಡಿದ್ದರು.
ಯೂನಿಯನ್ ಅಧ್ಯಕ್ಷ ವಿ.ಎನ್.ಭಟ್ಟ ಅಳ್ಳಂಕಿ ಅಧ್ಯಕ್ಷತೆ ವಹಿಸಿದ್ದರು. ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಲ್. ಟಿ. ಕೊಚರೇಕರ್ ವಂದಿಸಿದರು.