ವಿಧಾನಸೌಧದಲ್ಲಿ ಸೆಡ್ಡು ಹೊಡೆದು, ತೊಡೆ ತಟ್ಟಿ, ಬಳ್ಳಾರಿಗೆ ಬಂದೇ ಬರುತ್ತೇನೆ ಎಂದು ಹೇಳಿ, ಬಳ್ಳಾರಿಗೆ ಪಾದಯಾತ್ರೆ ಮೂಲಕ ಹೋಗಿ ಚುನಾವಣೆಯಲ್ಲಿ ಬಹುಮತ ಪಡೆದು ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು, ಸೆಡ್ಡು ಹೊಡೆಯುವ, ತೊಡೆ ತಟ್ಟುವ ಪೈಲ್ವಾನರ ಯಾವ ಬೇಡಿಕೆಯನ್ನೂ ಈಡೇರಿಸಿಲ್ಲ.
ಪೈಲ್ವಾನರ ಮಾಸಾಶನನ ಕೇವಲ 750 ರೂಪಾಯಿಗಳಿದ್ದು, ಅದನ್ನು 3000 ರೂಪಾಯಿಗಳಿಗೆ ಹೆಚ್ಚಿಸಬೇಕು. ರಾಜ್ಯದಲ್ಲಿ ಗರಡಿ ಮನೆಗಳು ಶಿಥಿಲಗೊಂಡಿವೆ ಹಾಗೂ ಬಿದ್ದು ಹೋಗಿವೆ. ಕೆಲವು ಕಡೆಗಳಲ್ಲಿ ಗರಡಿ ಮನೆಗೆ ಜಾಗೆ ಇದೆ. ಕೆಲವರು ಆಕ್ರಮಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ತಡೆ ಬೇಕು. ಹೊಸ ಗರಡಿ ಮನೆಗಳನ್ನು ನಿರ್ಮಿಸಬೇಕಾಗಿದೆ.
ಐತಿಹಾಸಿಕ ಹಿನ್ನೆಲೆ ಹೊಂದಿರುವ ಕುಸ್ತಿ ಕಲೆಯನ್ನು ಪ್ರೋತ್ಸಾಹಿಸಲು ಸರ್ಕಾರವೇ ಪ್ರೌಢಶಾಲೆಗಳಲ್ಲಿ ಕುಸ್ತಿ ತರಬೇತಿ ನೀಡಿ, ಪ್ರತೀ ವರ್ಷ ಹೊಬಳಿ, ತಾಲ್ಲೂಕು, ಜಿಲ್ಲೆ, ರಾಜ್ಯ ಮಟ್ಟದ ಕುಸ್ತಿ ಆಡಿಸುವ ಮೂಲಕ ಮುಂಬರುವ ಪೀಳಿಗೆಯನ್ನು ಆರೋಗ್ಯವಂತರನ್ನಾಗಿ ಮಾಡಬೇಕು.
ಪೊಲೀಸ್ ಇಲಾಖೆ ಸೇರಿದಂತೆ ರಕ್ಷಣಾ ಇಲಾಖೆಯಲ್ಲಿ ನೌಕರಿ ನೀಡುವ ಸಂದರ್ಭದಲ್ಲಿ ಕುಸ್ತಿ ಪಟುಗಳಿಗೆ ಮಿಸಲಾತಿ ನಿಗದಿಪಡಿಸ ಬೇಕು. ರಾಜ್ಯ, ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟಕ್ಕೆ ಹೋಗಿ ಬರುವ ಕುಸ್ತಿ ಪಟುಗಳಿಗೆ ನೀಡುವ ಧನ ಸಹಾಯ ಎರಡು ಪಟ್ಟು ಹೆಚ್ಚಿಸಬೇಕು.