ಶಿಕ್ಷಾರ್ಹ ಅಪರಾಧಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ನೀಡಿದರೂ ಪೊಲೀಸರು ಕಡ್ಡಾಯವಾಗಿ ಮೊದಲು ಎಫ್ಐಆರ್ ದಾಖಲಿಸಬೇಕು ಎಂದು ಸುಪ್ರೀಂಕೋರ್ಟ್ ಕಳೆದ ನವೆಂಬರ್ನಲ್ಲಿ ಸ್ಪಷ್ಟವಾಗಿ ಹೇಳಿದೆ. ಈ ಬಗ್ಗೆ ನಮ್ಮ ಪೊಲೀಸ್ ಠಾಣೆಗಳಲ್ಲಿ ಇನ್ನೂ ಜಾಗೃತಿ ಮೂಡಿದಂತಿಲ್ಲ. ಅತ್ಯಾಚಾರದಂತಹ ಶಿಕ್ಷಾರ್ಹ ಅಪರಾಧಗಳ ಕುರಿತಾದ ದೂರುಗಳನ್ನು ದಾಖಲಿಸಿಕೊಳ್ಳಲು ಪೊಲೀಸ್ ಠಾಣೆಗಳಲ್ಲಿ ಸಾಮಾನ್ಯವಾಗಿ ನಿರಾಕರಿಸಲಾಗುತ್ತದೆ ಎಂಬುದನ್ನು ಹಾವೇರಿ ಹಾಗೂ ಕುಂದಗೋಳ ಪೊಲೀಸ್ ಠಾಣೆಗಳು ಮತ್ತೊಮ್ಮೆ ಸಾಬೀತುಪಡಿಸಿವೆ.
ಈ ತರಹದ ಅನುಭವಗಳಿಂದಾಗಿಯೇ ರಾಷ್ಟ್ರದಲ್ಲಿ ಅದೆಷ್ಟು ಅತ್ಯಾಚಾರ ಪ್ರಕರಣಗಳು ವರದಿಯಾಗದೇ ಹೋಗುತ್ತಿರಬಹುದು ಎಂಬುದನ್ನು ಊಹಿಸಬಹುದು. ಈ ಪ್ರಕರಣದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾಗಿರುವಾಕೆ ಎಂಟನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ. ಕಡೆಗೂ ಧಾರವಾಡದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿರ್ದೇಶನದ ನಂತರವಷ್ಟೇ ತಡವಾಗಿ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದಾರೆ ಎಂಬಂತಹ ಪೋಷಕರ ಆರೋಪ ನಮ್ಮ ಆಡಳಿತದ ಜಡ ವ್ಯವಸ್ಥೆಗೆ ದ್ಯೋತಕ.
ಅತ್ಯಾಚಾರ ಪ್ರಕರಣದ ಬಗ್ಗೆ ಬಾಲಕಿಗೆ ಪದೇಪದೇ ಪ್ರಶ್ನಿಸಿ ನೀಡಲಾಗಿರುವ ಕಿರುಕುಳವಂತೂ ಅಮಾನವೀಯವಾದದ್ದು. ದೂರು ತೆಗೆದುಕೊಳ್ಳುವುದು ತಡವಾದಷ್ಟೂ ಅತ್ಯಾಚಾರ ಪ್ರಕರಣಗಳಿಗೆ ಅತ್ಯಗತ್ಯವಾದ ವೈದ್ಯಕೀಯ ಸಾಕ್ಷ್ಯಗಳು ನಾಶವಾಗುತ್ತವೆಂಬ ಪ್ರಾಥಮಿಕ ಅರಿವೂ ನಮ್ಮ ಪೊಲೀಸ್ ವ್ಯವಸ್ಥೆಗೆ ಇಲ್ಲದಿರುವುದು ದುರದೃಷ್ಟಕರ.
ದೆಹಲಿ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರ ಕಳೆದ ಇಡೀ ವರ್ಷ ಅತ್ಯಾಚಾರ ವಿಷಯ ಕುರಿತು ರಾಷ್ಟ್ರದಾದ್ಯಂತ ಬಹಳಷ್ಟು ಚರ್ಚೆಗಳು ನಡೆದಿವೆ. ಈ ಸಂದರ್ಭದಲ್ಲಿ ಪೊಲೀಸರ ಅಮಾನವೀಯ ಹಾಗೂ ಅಸೂಕ್ಷ್ಮ ವರ್ತನೆಗಳೂ ಸಾಕಷ್ಟು ಟೀಕೆಗೊಳಗಾಗಿವೆ. ಹೀಗಿದ್ದೂ ಲೈಂಗಿಕ ಅಪರಾಧಗಳ ನಿರ್ವಹಣೆಯಲ್ಲಿ ಪೊಲೀಸ್ ವ್ಯವಸ್ಥೆಯಲ್ಲಿ ಸೂಕ್ಷ್ಮತೆ ಬೆಳೆಯದೆ ಜನವಿರೋಧಿಯಾಗೇ ಉಳಿದುಕೊಂಡಿರುವುದು ಅಕ್ಷಮ್ಯ. ಚಿಕ್ಕ ವಯಸ್ಸಿನ ಹುಡುಗಿಯರು ಲೈಂಗಿಕ ದೌರ್ಜನ್ಯಗಳಿಗೆ ಇತ್ತೀಚಿನ ದಿನಗಳಲ್ಲಿ ಸುಲಭ ಬಲಿಪಶುಗಳಾಗುತ್ತಿರುವು ದಂತೂ ಆತಂಕಕಾರಿ.
ರಾಷ್ಟ್ರದಲ್ಲಿ ಪ್ರತಿ 20 ನಿಮಿಷಗಳಿಗೊಮ್ಮೆ ಅತ್ಯಾಚಾರ ಪ್ರಕರಣ ನಡೆಯುತ್ತದೆ. ಅದರಲ್ಲಿ ಪ್ರತಿ ಮೂರನೇ ಬಲಿಪಶು ಚಿಕ್ಕ ವಯಸ್ಸಿನ ಬಾಲೆಯರಾಗಿರುತ್ತಾರೆ ಎಂಬುದನ್ನು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ ಅಂಕಿಅಂಶಗಳೂ ತಿಳಿಸಿವೆ. ವಾಸ್ತವವಾಗಿ ಅತ್ಯಾಚಾರ ಅಪರಾಧಗಳಿಗೆ ಶಿಕ್ಷೆಯಾಗುವ ಪ್ರಮಾಣವೇ ಕಡಿಮೆ. ಇದಕ್ಕೆ ದೋಷಯುಕ್ತವಾದ ಎಫ್ಐಆರ್ಗಳೇ ಮುಖ್ಯ ಕಾರಣ. ವೈದ್ಯಕೀಯ ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿನ ದೋಷಪೂರ್ಣ ವಿಧಾನಗಳು ಹಾಗೂ ಕಳಪೆ ತನಿಖಾ ವಿಧಾನಗಳು ಮತ್ತಷ್ಟು ಕಾರಣಗಳಾಗುತ್ತವೆ.
ಮಹಿಳೆ ವಿಚಾರಗಳನ್ನು ಗಂಭೀರವಾಗಿ ಗ್ರಹಿಸಲಾಗದ ಪೂರ್ವಗ್ರಹಗಳು ತುಂಬಿದ ಪೊಲೀಸ್ ವ್ಯವಸ್ಥೆಯೇ ಇದಕ್ಕೆ ಕಾರಣ. ಲೈಂಗಿಕ ಅಪರಾಧಗಳಿಗೆ ‘ಆಡಳಿತ ವೈಫಲ್ಯ’ವೇ ಮೂಲ ಕಾರಣ ಎಂಬುದನ್ನು ಲೈಂಗಿಕ ಅಪರಾಧಗಳ ಕಾನೂನುಗಳ ಪುನರ್ವಿಮರ್ಶೆಗೆ ನೇಮಕಗೊಂಡಿದ್ದ ನ್ಯಾಯಮೂರ್ತಿ ಜೆ.ಎಸ್.ವರ್ಮಾ ಸಮಿತಿಯೂ ಗುರುತಿಸಿದೆ. ಸರ್ಕಾರ, ಪೊಲೀಸ್ ಹಾಗೂ ಸಾರ್ವಜನಿಕ ನಿರ್ಲಕ್ಷ್ಯವನ್ನು ಈ ಸಮಿತಿ ಕಟುವಾಗಿ ಟೀಕಿಸಿದ್ದರೂ ನಾವಿನ್ನೂ ಎಚ್ಚೆತ್ತುಕೊಳ್ಳದಿರುವುದು ವಿಷಾದಕರ. ಕಾನೂನು ಜಾರಿ ವ್ಯವಸ್ಥೆಗಳು ಇನ್ನಾದರೂ ಚುರುಕಾಗಬೇಕು. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪೊಲೀಸ್ ವ್ಯವಸ್ಥೆಯನ್ನು ಸಂವೇದನಾಶೀಲವಾಗಿಸಲು ಕ್ರಮಗಳನ್ನು ಕೈಗೊಳ್ಳಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.