ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರಿಗೆ ದಿಗ್ಬಂಧನ

Last Updated 9 ಅಕ್ಟೋಬರ್ 2012, 8:40 IST
ಅಕ್ಷರ ಗಾತ್ರ

ಹಾಸನ: ಅಪಘಾತದಲ್ಲಿ ಗಾಯಗೊಂಡು ನಿಧನ ಹೊಂದಿದ ವ್ಯಕ್ತಿಯ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದ ಪೊಲೀಸರಿಗೆ ಮಾದಿಗ ದಂಡೋರ ಸಂಘಟನೆಯವರು  ದಿಗ್ಬಂಧನ ಹಾಕಿದ ಘಟನೆ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ನಡೆದಿದೆ.

ನಗರದ ಹೇಮಂತ್ ಕುಮಾರ್ (18) ಎಂಬುವವರು ಅ.1ರಂದು ಸ್ನೇಹಿತನೊಂದಿಗೆ ಬೆಂಗಳೂರಿನಲ್ಲಿ  ಬೈಕ್‌ನಲ್ಲಿ ಹೋಗುತ್ತಿದ್ದಾಗ ಬೆಮೆಲ್ ವೃತ್ತದಲ್ಲಿ ಕಾರಿಗೆ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅವರು ನಿಧನ ಹೊಂದಿದ್ದರು.

ಬೆಂಗಳೂರಿನಲ್ಲಿ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಮೃತವ್ಯಕ್ತಿಯ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಲು ಇನ್‌ಸ್ಪೆಕ್ಟರ್ ಸೊಹೇಲ್ ಹಾಗೂ ಭತ್ಯಪ್ಪ ಎಂಬುವವರು ಸೋಮವಾರ ಸಂಜೆ ಹಾಸನದ ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು. ಇಲ್ಲಿ ಅವರಿಗೆ  ದಿಗ್ಬಂಧನ ಹಾಕಲಾಯಿತು.

`ಬೆಂಗಳೂರಿನ ಪೊಲೀಸರು ಅಪಘಾತದ ಸಂದರ್ಭದಲ್ಲಿ ಹೇಮಂತ್ ಅವರೇ ಬೈಕ್ ಓಡಿಸುತ್ತಿದ್ದರು ಎಂದು ಎಫ್‌ಐಆರ್‌ನಲ್ಲಿ  ದಾಖಲಿಸಿದ್ದಾರೆ. ಆದರೆ ಆ ಸಂದರ್ಭದಲ್ಲಿ ಅವರು ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದರು. ಅಪಘಾತಕ್ಕೆ ಕಾರಣವಾಗಿದ್ದ ಕಾರಿನ ಮಾಲೀಕರಿಂದ ಪೊಲೀಸರು ಒಂದು ಲಕ್ಷ ರೂಪಾಯಿ ಪಡೆದು ಅದರಲ್ಲಿ 25 ಸಾವಿರ ರೂಪಾಯಿಯನ್ನು ಮಾತ್ರ ಮೃತನ ಕುಟುಂಬದವರಿಗೆ ನೀಡಿದ್ದಾರೆ~ ಎಂದು ಮಾದಿಗ ದಂಡೋರದ ಕಾರ್ಯಕರ್ತರು ಆರೋಪಿಸಿದರು. ಈ ಬಗ್ಗೆ ಭತ್ಯಪ್ಪ ಅವರ ಜತೆಗೆ ನಡೆದ ಮಾತುಕತೆಯನ್ನು ಕೆಲವರು ಮೊಬೈಲ್‌ನಲ್ಲಿ ದಾಖಲು ಮಾಡಿಕೊಂಡಿದ್ದರು.

ಈ ಆರೋಪಗಳನ್ನು ತಳ್ಳಿ ಹಾಕಿರುವ ಇನ್‌ಸ್ಪೆಕ್ಟರ್ ಸೊಹೇಲ್, `ಹೇಮಂತ್ ಅವರೇ ಬೈಕ್ ಓಡಿಸುತ್ತಿದ್ದಾರೆ ಎಂಬುದು ಸಿ.ಸಿ. ಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ಉಳಿದಂತೆ 25ಸಾವಿರ ರೂಪಾಯಿ ವ್ಯವಹಾರದ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಕಾರಿನ ಮಾಲೀಕರು ಮತ್ತು ಇವರ ಕುಟುಂಬದವರೇ ನಂತರದ ಮಾತುಕತೆ  ನಡೆಸಿರಬಹುದು~ ಎಂದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT