ಕೋಲಾರ: ಸಂಚಾರ ನಿಯಮ ಉಲ್ಲಂಘಿಸಿಯೂ ವಾಹನ ಸವಾರರೊಬ್ಬರು ಸಂಚಾರ ನಿಯಂತ್ರಣ ಠಾಣೆ ಪೊಲೀಸರೊಡನೆ ವಾಗ್ವಾದಕ್ಕೆ ಮುಂದಾದ ಘಟನೆ ನಗರದ ಎಂ.ಜಿ.ರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆಯಿತು. ರಾತ್ರಿ 7 ಗಂಟೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ರಸ್ತೆಯ ತಿರುವಿನಲ್ಲಿ ಸಂಚಾರ ನಿಯಂತ್ರಣ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಘಟನೆ ನಡೆದಿದೆ.
ಏಕಮುಖ ಸಂಚಾರ ನಿಯಮ ಉಲ್ಲಂಘಿಸಿ ಬಂದವರನ್ನು ಅಡ್ಡಗಟ್ಟಿ ಅವರಿಂದ ದಂಡ ಶುಲ್ಕ ವಸೂಲು ಮಾಡುವ ಸಂದರ್ಭದಲ್ಲಿ ವಾಹನ ಸವಾರರೊಬ್ಬರು ಆಕ್ಷೇಪಿಸಿದರು. ಯಾವತ್ತೋ ಒಂದು ದಿನ ಕಾರ್ಯಾಚರಣೆ ನಡೆಸಿ ದಂಡ ಶುಲ್ಕ ವಿಧಿಸುವುದು ಸರಿಯಲ್ಲ. ದಿನವೂ ಕಾರ್ಯಾಚರಣೆ ನಡೆಸಿದರೆ ನಿಯಮ ಉಲ್ಲಂಘನೆ ಮಾಡುವವರಲ್ಲಿ ಅರಿವು ಮೂಡುತ್ತದೆ ಎಂದು ಪೊಲೀಸರನ್ನು ದಬಾಯಿಸಿದರು.
ದಿನವೂ ಬಂದು ರಸ್ತೆಯಲ್ಲಿ ನಿಲ್ಲುವುದಷ್ಟೇ ತಮ್ಮ ಕೆಲಸವಲ್ಲ. ಇನ್ನಿತರ ಜವಾಬ್ದಾರಿಗಳೂ ಇರುತ್ತವೆ ಎಂದು ಪೊಲೀಸರು ಸಮಜಾಯಿಷಿ ನೀಡಿದರೂ, ದಂಡ ಶುಲ್ಕವನ್ನು ಪಾವತಿಸಲು ಸವಾರ ನಿರಾಕರಿಸಿದರು. ಹೀಗಾಗಿ ಕೋಪಗೊಂಡ ಎಸ್ಐ ವಾಹನವನ್ನು ಜಪ್ತಿ ಮಾಡಲಾಗುವುದು. ನ್ಯಾಯಾಲಯದಲ್ಲೇ ಶುಲ್ಕ ಪಾವತಿಸಿ ಎಂದು ಸೂಚಿಸಿದರು.