ಬೆಂಗಳೂರು: ಈಶಾನ್ಯ ರಾಜ್ಯಗಳ ಜನರ ಮೇಲಾಗುತ್ತಿರುವ ಹಲ್ಲೆ ಸಂಬಂಧ ಅಶೋಕನಗರ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಅಶೋಕನಗರ ಠಾಣೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಸಂಘಟನೆಯ ರಾಜ್ಯ ಘಟಕದ ಸಹ ಸಂಚಾಲಕ ಉಲ್ಲಾಸ್ ಮಾತನಾಡಿ, `ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿ ಆಗಸ್ಟ್ 2ರಿಂದಲೇ ಇಂತಹ ಪ್ರಕರಣಗಳು ನಡೆಯುತ್ತಿವೆ. ನೀಲಸಂದ್ರ, ಆಸ್ಟಿನ್ಟೌನ್, ವಿವೇಕನಗರ ಸೇರಿದಂತೆ ಠಾಣೆ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಈಶಾನ್ಯ ಭಾಗದ ಜನ ಹಲ್ಲೆಗೊಳಗಾಗಿದ್ದಾರೆ. ಅವರ ದೂರುಗಳನ್ನು ದಾಖಲಿಸಿಕೊಳ್ಳದೇ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ. ಇದರ ಪರಿಣಾಮ ಸಾವಿರಾರು ಮಂದಿ ತಮ್ಮ ರಾಜ್ಯಗಳಿಗೆ ಹಿಂದಿರುಗುವಂತಾಗಿದೆ~ ಎಂದು ಆರೋಪಿಸಿದರು.
ಭದ್ರತೆಗೆ ಸಿಆರ್ಪಿಎಫ್ ನಿಯೋಜನೆ: ವದಂತಿಯಿಂದ ಆಘಾತಗೊಂಡಿರುವ ನಗರದ ಈಶಾನ್ಯ ರಾಜ್ಯಗಳ ನಾಗರಿಕರ ಭದ್ರತೆಗಾಗಿ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಮೂರು ಕಂಪೆನಿಗಳನ್ನು ನಿಯೋಜಿಸಲಾಗಿದೆ.
ನಗರದ ಕೇಂದ್ರ, ಪೂರ್ವ ಮತ್ತು ಆಗ್ನೇಯ ವಿಭಾಗದಲ್ಲಿ ಸಿಆರ್ಪಿಎಫ್ ಕಂಪೆನಿಗಳನ್ನು ನಿಯೋಜಿಸಗುವುದು. ಶನಿವಾರ ಮತ್ತಷ್ಟು ಸಿಆರ್ಪಿಎಫ್ ಕಂಪೆನಿಗಳು ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್ಎಎಫ್) ತುಕಡಿಗಳು ಬರುವ ಸಾಧ್ಯತೆಯಿದೆ. ಪರಿಸ್ಥಿತಿಗೆ ಅನುಗುಣವಾಗಿ ತುಕಡಿಗಳನ್ನು ನಿಯೋಜಿಸಲಾಗುವುದು ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್ ಕುಮಾರ್ ತಿಳಿಸಿದರು.