ಬಂಗಾರಪೇಟೆ: ತೋಟಿ ಇನಾಮ್ತಿ ಜಮೀನು ಉಳುಮೆ ಮಾಡಲು ಪೊಲೀಸ್ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಕಳೆದ 17 ದಿನದಿಂದ ತಾಲ್ಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸುತ್ತಿರುವ ಐವಾರಳ್ಳಿ ಗ್ರಾಮದ ತೋಟಿ ನೌಕರರು, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಸದಸ್ಯರು ಶುಕ್ರವಾರ ಮೌನ ಮೆರವಣಿಗೆ ನಡೆಸಿದರು.
ಐವಾರಳ್ಳಿ ಗ್ರಾಮದಲ್ಲಿ ತೋಟಿ ಇನಾಮ್ತಿಯಾಗಿ ವೆಂಕಟಪ್ಪ, ಗಂಟ್ಲಪ್ಪ, ಕುಪ್ಪನ್ನ ಎಂಬುವರಿಗೆ ಸರ್ಕಾರ 2.38 ಎಕರೆ ಜಮೀನು ನೀಡಿದೆ. ಆದರೆ ಅದೇ ಗ್ರಾಮದ ಪ್ರಬಲ ವ್ಯಕ್ತಿಯೊಬ್ಬರು ಈ ಜಮೀನನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದಾರೆ. ಮೂಲ ವಾರಸುದಾರರನ್ನು ತಮ್ಮ ಜಮೀನಿಗೆ ಹೋಗಲು ಬಿಡುತ್ತಿಲ್ಲ. ಉಳುಮೆ ಮಾಡಲು ಹೋದವರ ಮೇಲೆ ದೌರ್ಜನ್ಯ ಎಸಗಿ ತೊಂದರೆ ನೀಡುತ್ತಿದ್ದಾರೆ ಎಂದು ಅವರು ದೂರಿದರು.
ದಲಿತರ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಕ್ರಮ ಜರುಗಿಸಿ, ವಾರಸುದಾರರ ಮಕ್ಕಳ ಹೆಸರಿಗೆ ಖಾತೆ ಮಾಡಿಸಬೇಕು. ಮೂಲ ವಾರಸುದಾರರಾದ ತೋಟಿಗರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ನಿರತರೊಂದಿಗೆ ಮಾತನಾಡಿದ ಉಪ ವಿಭಾಗಾಧಿಕಾರಿ ಅಂಜುಮ್ ಪರ್ವೇಜ್, ದಾಖಲೆಗಳನ್ನು ಪರಿಶೀಲಿಸಿ ಒಂದು ತಿಂಗಳ ಒಳಗೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.