ನವದೆಹಲಿ (ಪಿಟಿಐ): ಅಣ್ಣಾ ತಂಡದ ಸದಸ್ಯೆ ಕಿರಣ್ ಬೇಡಿ ಅವರು ತಮ್ಮ ಸರ್ಕಾರೇತರ ಸಂಘಟನೆಯ ಮೂಲಕ ಉಚಿತ ಕಂಪ್ಯೂಟರ್ ತರಬೇತಿ ನೀಡುವ ನೆಪದಲ್ಲಿ ವಿವಿಧ ಅರೆ ಸೇನಾ ಪಡೆಗಳು ಮತ್ತು ಪೊಲೀಸ್ ಸಂಘಟನೆಗಳಿಂದ ಹಣ ಲೂಟಿ ಮಾಡಿದ್ದಾರೆ ಎಂಬ ಆರೋಪಗಳನ್ನು ಸಾಬೀತು ಪಡಿಸುವಂತಹ ಯಾವುದೇ ಪುರಾವೆ ತನಿಖೆಗಾರರಿಗೆ ಲಭಿಸಿಲ್ಲ ಎಂದು ಪೊಲೀಸ್ ಮೂಲಗಳು ಸೋಮವಾರ ಇಲ್ಲಿ ತಿಳಿಸಿವೆ.
ಮಾಜಿ ಐಪಿಎಸ್ ಅಧಿಕಾರಿಯ ವಿರುದ್ಧ ಮಾಡಲಾಗಿದ್ದ ಆರೋಪಗಳ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ದೆಹಲಿ ಪೊಲೀಸರು ಕಳೆದ ವರ್ಷ ನವೆಂಬರ್ 27ರಂದು ವಂಚನೆ ಮತ್ತು ನಂಬಿಕೆ ದ್ರೋಹ ಪ್ರಕರಣಗಳನ್ನು ದಾಖಲಿಸಿದ್ದರು.
ಬೇಡಿ ಅವರು ಅರೆ ಸೇನಾ ಪಡೆ ಸಿಬ್ಬಂದಿಗೆ ಕಂಪ್ಯೂಟರ್ ತರಬೇತಿ ನೀಡಲು ಮೈಕ್ರೋಸಾಫ್ಟ್ ಸಂಸ್ಥೆಯಿಂದ ದಾನವಾಗಿ ಲಭಿಸಿದ ಹಣವನ್ನು ದುರುಪಯೋಗ ಮಾಡಿದ್ದಾರೆ ಎಂಬುದನ್ನು ಸಾಬೀತು ಪಡಿಸುವಂತಹ ಯಾವುದೇ ಪುರಾವೆಯೂ ತಮಗೆ ಲಭಿಸಿಲ್ಲ ಎಂಬುದಾಗಿ ಪೊಲೀಸ್ ಮೂಲಗಳು ಹೇಳಿವೆ.
ಬೇಡಿ ಅವರ ಸರ್ಕಾರೇತರ ಸಂಘಟನೆಯ ದಾಖಲೆಗಳ ಪರಿಶೀಲನೆಯಿಂದ ಆರೋಪ ಸಾಬೀತು ಮಾಡುವಂತಹ ಸಾಕ್ಷಾಧ್ಯಾರಗಳು ಲಭಿಸಿಲ್ಲ. ತನಿಖೆಗಾರರು ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಸಮಾಪನ ವರದಿಯನ್ನು ಸಲ್ಲಿಸುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ ಎಂದು ಮೂಲಗಳು ಹೇಳಿದವು.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಬೇಡಿ ಅವರು ~ಈ ಹಂತದಲ್ಲಿ ನಾನು ಕೃತಜ್ಞನಾಗಿದ್ದೇನೆ ಎಂದಷ್ಟೇ ಹೇಳಬಯಸುತ್ತೇನೆ~ ಎಂದು ಪಿಟಿಐಗೆ ತಿಳಿಸಿದರು.
~ಬೇಡಿ ಅವರು ತಮ್ಮ ಸರ್ಕಾರೇತರ ಸಂಘಟನೆ ಮೂಲಕ ಉಚಿತ ಕಂಪ್ಯೂಟರ್ ತರಬೇತಿ ನೀಡುವ ನೆಪದಲ್ಲಿ ವಿವಿಧ ಅರೆ ಸೇನಾ ಪಡೆಗಳು ಮತ್ತು ಪೊಲೀಸ್ ಸಂಘಟನೆಗಳಿಂದ ಹಣ ~ಲೂಟಿ~ ಮಾಡಿದ್ದರು ಎಂದು ದೆಹಲಿಯ ವಕೀಲ ದೇವೀಂದರ್ ಸಿಂಗ್ ಚೌಹಾಣ್ ಆಪಾದಿಸಿದ್ದರು.