ಮಾನ್ವಿ: ಪಟ್ಟಣದ ರಾಷ್ಟ್ರಕವಿ ಕುವೆಂಪು ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ತಾಲ್ಲೂಕಿನ ಪೋತ್ನಾಳ ಗ್ರಾಮದಲ್ಲಿ ಶನಿವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ನಗೆಹಬ್ಬ-2011 ಕಾರ್ಯಕ್ರಮ ಜನಮನ ರಂಜಿಸುವಲ್ಲಿ ಯಶಸ್ವಿಯಾಯಿತು.
ಖ್ಯಾತ ಹಾಸ್ಯ ಕಲಾವಿದರಾದ ಬಿ.ಪ್ರಾಣೇಶ ಗಂಗಾವತಿ, ನರಸಿಂಹ ಜೋಷಿ ಹಾಗೂ ಇಂದುಮತಿ ಸಾಲಿಮಠ ಅವರು ತಮ್ಮ ಹಾಸ್ಯ ಚಟಾಕಿಗಳ ಮೂಲಕ ಸುಮಾರು ಮೂರುಗಂಟೆಗಳ ಕಾಲ ನೆರೆದಿದ್ದ ಜನರನ್ನು ನಗೆಗಡಲಲ್ಲಿ ತೇಲಿಸಿದರು. ನರಸಿಂಹ ಜೋಷಿ ಹಾಗೂ ಇಂದುಮತಿ ಸಾಲಿಮಠ ಅವರು ಮಿಮಿಕ್ರಿಗಳ ಮೂಲಕ ಪ್ರೇಕ್ಷಕರನ್ನು ನಕ್ಕು ನಲಿಸುವಲ್ಲಿ ಯಶಸ್ವಿಯಾದರು. ಇದೇ ಸಂದರ್ಭದಲ್ಲಿ ಮಾತನಾಡಿದ ಬಿ.ಪ್ರಾಣೇಶ, 90ರ ದಶಕದಲ್ಲಿ ತಮ್ಮ ಹಾಸ್ಯ ಕಾರ್ಯಕ್ರಮಗಳು ಮಾನ್ವಿ ತಾಲ್ಲೂಕಿನಿಂದಲೇ ಪ್ರಥಮವಾಗಿ ಆರಂಭವಾದವು, ತಮ್ಮ 50ನೇ ವರ್ಷದ ಜನ್ಮದಿನದಂದು ಪೋತ್ನಾಳ ಗ್ರಾಮದಲ್ಲಿ ಹಾಸ್ಯ ಕಾರ್ಯಕ್ರಮ ನಡೆಯುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ವಿಶ್ವನಾಥ ಪಾಟೀಲ್ ತೋರಣದಿನ್ನಿ, ಗ್ರಾಮೀಣ ಪ್ರದೇಶಗಳಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚಾಗಿ ಆಯೋಜಿಸುತ್ತಿರುವ ಕುವೆಂಪು ಪ್ರತಿಷ್ಠಾನದ ಸೇವೆಯನ್ನು ಶ್ಲಾಘಿ ಸಿದರು. ನೂತನ ಜನಪ್ರತಿನಿಧಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.
ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ರಾಮಚಂದ್ರಪ್ಪ ಅಧ್ಯಕ್ಷೆವಹಿಸಿದ್ದರು.
ಪೋತ್ನಾಳ ಗ್ರಾಮದ ಮುಖಂಡರಾದ ವೈಜನಾಥ ನಾಡಗೌಡ, ಡಾ.ವಿ.ಜಿ.ಶರ್ಮಾ, ಆರ್.ಎನ್.ರಾಜಶೇಖರ, ಡಾ.ಬಿ.ಬಸವರಾಜ, ಕೆ.ಎಸ್.ವೀರಭದ್ರಯ್ಯಸ್ವಾಮಿ, ಶ್ರೀನಿವಾಸ ನಾಯಕ, ವಕೀಲ ಎಮ್.ವೀರನಗೌಡ ಪೋತ್ನಾಳ, ಕುಮಾರಸ್ವಾಮಿ, ಎಮ್.ಮಲ್ಲಿಕಾರ್ಜುನ , ಸಾಹಿತಿ ಎಮ್.ವೀರೇಶ ಹಾಗೂ ಪ್ರತಿಷ್ಠಾನದ ಪದಾಧಿಕಾರಿಗಳಾದ ಬಾಲಾಜಿಸಿಂಗ್,್ ಡಿ.ಬಸನಗೌಡ, ಎಚ್.ಶರ್ಪುದ್ದೀನ್ ಪೋತ್ನಾಳ, ಷಣ್ಮುಖ ಆಚಾರ್ ಮತ್ತಿತರರು ಇದ್ದರು.