ಲಿಂಗಸುಗೂರ(ಮಸ್ಕಿ): ಪೋಲಿಯೊ ಎಂಬುದು ಸಮಾಜಕ್ಕೆ ಅಂಟಿದ ಒಂದು ಕಳಂಕ. ಅಂತೆಯೆ ಸರ್ಕಾರಗಳು ಪೋಲಿಯೊ ನಿಯಂತ್ರಣಕ್ಕೆ ಸಾಕಷ್ಟು ಶ್ರಮವಹಿಸುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಪೋಲಿಯೊ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಸಹಕಾರ ನೀಡುವಂತೆ ಶಾಸಕ ಪ್ರತಾಪಗೌಡ ಪಾಟೀಲ ಕರೆ ನೀಡಿದರು.
ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಪೋಲಿಯೊ ಲಸಿಕೆ ಕಾರ್ಯಕ್ರಮದಲ್ಲಿ ಮಗುವೊಂದಕ್ಕೆ ಲಸಿಕೆ ಹಾಕುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಈಗಾಗಲೆ ಎಷ್ಟೆ ಬಾರಿ ಲಸಿಕೆ ಹಾಕಿಸಿದ್ದರೂ ಪುನಃ ಮತ್ತೊಮ್ಮೆ ಹಾಕಿಸಬೇಕು. ಮೇಲಿಂದ ಮೇಲೆ ಪೋಲಿಯೊ ಹನಿ ಹಾಕಿಸುವುದರಿಂದ ಯಾವುದೇ ದುಷ್ಪರಿಣಾಮಗಳಿಲ್ಲ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಬಿ. ಮುರಾರಿ, ತಾಲ್ಲೂಕು ಪಂಚಾಯಿತಿ ಸದಸ್ಯ ಹನುಮಂತಪ್ಪ ಮೋಚಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಮ್ಮ ಕಬ್ಬೇರ, ಉಪಾಧ್ಯಕ್ಷ ಶಂಕರಪ್ಪ ಮೋಚಿ, ಸದಸ್ಯರಾದ ಬಸವರಾಜ ನಾಯಕವಾಡಿ, ಮಲ್ಲಯ್ಯ ಬಳ್ಳಾ, ಅಶೋಕ ನಾಯಕ, ಡಾ. ಸುನಿಲ್, ಡಾ. ಬಾಸಿತ್ ಮತ್ತಿತರರು ಇದ್ದರು.