ಭುವನೇಶ್ವರ: ಒಡಿಶಾದ ಜಗತ್ಸಿಂಗ್ಪುರ ಜಿಲ್ಲೆಯಲ್ಲಿ ದಕ್ಷಿಣ ಕೊರಿಯಾದ ಪ್ರಮುಖ ಉಕ್ಕು ತಯಾರಿಕಾ ಕಂಪೆನಿ `ಪೋಸ್ಕೊ~ 12 ಶತಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಉಕ್ಕು ಕಾರ್ಖಾನೆ ನಿರ್ಮಾಣ ವಿರೋಧಿಸಿ ಸ್ಥಳೀಯರು ನಡೆಸುತ್ತಿರುವ ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಿದೆ.
ಕರಾವಳಿ ತೀರ ಪ್ರದೇಶವಾದ ಧಿನ್ಕಿಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈ ಕಾರ್ಖಾನೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಸರ್ಕಾರ ಆರಂಭಿಸಿರುವ ಭೂಸ್ವಾಧೀನ ಪ್ರಕ್ರಿಯೆಗೆ ಗ್ರಾಮಸ್ಥರು ಶನಿವಾರ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು.
ಉದ್ದೇಶಿತ ಸ್ಥಳದಲ್ಲಿ ಸಾವಿರಾರು ಮಂದಿ ಬೃಹತ್ ಮಾನವ ಸರಪಳಿ ನಿರ್ಮಿಸಿ, ಯೋಜನೆಗಾಗಿ ತಮ್ಮ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ನಿರ್ಧಾರವನ್ನು ಖಂಡಿಸಿದರು. ಮಾವನ ಸರಪಳಿಯಲ್ಲಿ ಭಾರಿ ಸಂಖ್ಯೆಯ ಮಹಿಳೆಯರು, ಶಾಲಾ ಮಕ್ಕಳು ಹಾಗೂ ಹಿರಿಯರು ಪಾಲ್ಗೊಂಡಿದ್ದರು.
20 ಸಶಸ್ತ್ರ ಸೇನಾ ತುಕಡಿಗಳೊಂದಿಗೆ ಜಿಲ್ಲಾಡಳಿತವು ಉದ್ದೇಶಿತ ಸ್ಥಳಕ್ಕೆ ತೆರಳಲು ಆಗಮಿಸಿತು. ಆದರೆ ಮಾನವ ಸರಪಳಿಯನ್ನು ಭೇದಿಸಿ ಮುಂದೆ ತೆರಳಲು ಅದಕ್ಕೆ ಸಾಧ್ಯವಾಗಲಿಲ್ಲ.
800 ಪೊಲೀಸರನ್ನು ನಿಯೋಜಿಸಿರುವ ಸರ್ಕಾರ, ಕೂಡಲೇ ಸ್ಥಳವನ್ನು ತೆರವುಗೊಳಿಸುವಂತೆ ಪ್ರತಿಭಟನಾಕಾರರಿಗೆ ಪದೇ ಪದೇ ಎಚ್ಚರಿಕೆ ನೀಡುತ್ತಿದೆ. ಇಷ್ಟಾದರೂ ಕಳೆದ ಹಲವು ದಿನಗಳಿಂದ ಪ್ರತಿಭಟನಾ ನಿರತರಾಗಿರುವ ವರನ್ನು ಕದಲಿಸಲು ಸಾಧ್ಯವಾಗಿಲ್ಲ.