ಬೆಂಗಳೂರು: ಕರ್ನಾಟಕ ತಂಡದವರು ಇಲ್ಲಿ ಆರಂಭವಾದ 25ನೇ ಅಖಿಲ ಭಾರತ ಪೋಸ್ಟಲ್ ಹಾಕಿ ಟೂರ್ನಿಯ ತಮಿಳುನಾಡು ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡರು.
ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ (ಕೆಎಸ್ಎಚ್ಎ) ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಉಭಯ ತಂಡಗಳು ತಲಾ ಒಂದೊಂದು ಗೋಲು ಗಳಿಸಿದವು.
ತಮಿಳುನಾಡಿನ ಜಯ ಪ್ರಕಾಶ್ 20ನೇ ನಿಮಿಷದಲ್ಲಿ ಗೋಲು ಗಳಿಸಿ ಆರಂಭಿಕ ಮುನ್ನಡೆ ಸಾಧಿಸಿದರು. ಇದಕ್ಕೆ ತಿರುಗೇಟು ನೀಡಿದ ಆತಿಥೇಯ ತಂಡದ ನವೀನ್ 28ನೇ ನಿಮಿಷದಲ್ಲಿ ಗೋಲು ಗಳಿಸಿ ಸಮಬಲ ಸಾಧಿಸಿದರು. ವಿರಾಮದ ವೇಳೆಗೆ ಉಭಯ ತಂಡಗಳಿಂದ ಈ ಗೋಲುಗಳು ಬಂದಿದ್ದವು.
ಪಂಜಾಬ್ ಹಾಗೂ ಉತ್ತರ ಪ್ರದೇಶ ತಂಡಗಳ ನಡುವಿನ ದಿನದ ಇನ್ನೊಂದು ಪಂದ್ಯವು 3-3ರಲ್ಲಿ ಡ್ರಾದಲ್ಲಿ ಅಂತ್ಯ ಕಂಡಿತು.
ಉತ್ತರ ಪ್ರದೇಶ ತಂಡದ ಅರವಿಂದ್ ಕುಮಾರ್ ಯಾದವ್ 5ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಇದಕ್ಕೆ ಸಾಥ್ ನೀಡಿದ ಸಚಿನ್ ಕುಮಾರ್ (15) ಮತ್ತು ವಿವೇಕ್ ಸೋನಿಯಾ (51ನೇ ನಿಮಿಷ) ಗೋಲು ಗಳಿಸಿದರು.
ವಿರಾಮದ ವೇಳೆಗೆ ಈ ತಂಡ 2-1ರಲ್ಲಿ ಮುನ್ನಡೆ ಹೊಂದಿತ್ತು.
ಇದಕ್ಕೆ ಪ್ರತಿಯಾಗಿ ಪಂಜಾಬ್ನ ಭಗವಂತ್ ಸಿಂಗ್ (18ನೇ ನಿಮಿಷ), ಲಕ್ವೀಂದರ್ ಸಿಂಗ್ (41) ಗೋಲು ತಂದಿಟ್ಟರು. ಆಗ ಉತ್ತರ ಪ್ರದೇಶ 3-2ರಲ್ಲಿ ಮುನ್ನಡೆಯಲ್ಲಿತ್ತು. ಬಲ್ವೀಂದರ್ ಸಿಂಗ್ 55ನೇ ನಿಮಿಷದಲ್ಲಿ ಗೋಲು ಕಲೆ ಹಾಕುವ ಮೂಲಕ ಪಂಜಾಬ್ ತಂಡವನ್ನು ಸೋಲಿನಿಂದ ಪಾರು ಮಾಡಿದರು.
ಮಂಗಳವಾರದ ಪಂದ್ಯಗಳು: ಕರ್ನಾಟಕ-ಒಡಿಶಾ (ಬೆಳಿಗ್ಗೆ 9.30) ಹಾಗೂ ಉತ್ತರ ಪ್ರದೇಶ-ಮಧ್ಯ ಪ್ರದೇಶ (ಮಧ್ಯಾಹ್ನ 1.45).