ಬೆಂಗಳೂರು: ಸಿ. ಪ್ರಕಾಶ್ ಗಳಿಸಿದ ನಾಲ್ಕು ಗೋಲುಗಳ ನೆರವಿನಿಂದ ಕರ್ನಾಟಕ ತಂಡ ಇಲ್ಲಿ ನಡೆಯುತ್ತಿರುವ 25ನೇ ಅಖಿಲ ಭಾರತ ಪೋಸ್ಟಲ್ ಹಾಕಿ ಟೂರ್ನಿಯ ಪಂದ್ಯದಲ್ಲಿ 7-0ಗೋಲುಗಳಿಂದ ಒಡಿಶಾ ಎದುರು ಅಂತರದ ಗೆಲುವು ಸಾಧಿಸಿತು.
ಅಕ್ಕಿ ತಿಮ್ಮನಹಳ್ಳಿ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯವು ಏಕಪಕ್ಷೀಯವಾಗಿ ಅಂತ್ಯ ಕಂಡಿತು.
ಆತಿಥೇಯ ತಂಡದ ದಿನೇಶ್ ಕುಮಾರ್ 7ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ನಂತರ ಚುರುಕಿನ ಆಟವಾಡಿದ ಸಿ. ಪ್ರಕಾಶ್ 12, 17, 53 ಹಾಗೂ 56ನೇ ನಿಮಿಷದಲ್ಲಿ ಗೋಲು ಗಳಿಸಿದರು. ವಿರಾಮದ ವೇಳೆಗೆ ಕರ್ನಾಟಕ 4-0ರಲ್ಲಿ ಮುನ್ನಡೆ ಸಾಧಿಸಿತ್ತು.
ಇದಾದ ನಂತರ ಸ್ಯಾಮುಯೆಲ್ ನಿರಂಜನ್ 33ನೇ ನಿಮಿಷದಲ್ಲಿ ಗೋಲು ಗಳಿಸಿದರು. ಮತ್ತೆ ಏಳು ನಿಮಿಷಗಳ ಅಂತರದಲ್ಲಿ ಇದೇ ಆಟಗಾರನಿಂದ ಮತ್ತೊಂದು ಗೋಲು ಬಂತು. ಕರ್ನಾಟಕ ತಂಡಕ್ಕೆ ಲಭಿಸಿದ ಮೊದಲ ಗೆಲುವು ಇದು. ಎದುರಾಳಿ ಒಡಿಶಾ ಪದೇ ಪದೇ ಗೋಲು ಗಳಿಸಲು ವಿಫಲ ಯತ್ನ ನಡೆಸಿತು.
ದಿನದ ಇನ್ನೊಂದು ಪಂದ್ಯದಲ್ಲಿ ಮಧ್ಯ ಪ್ರದೇಶ 5-1ಗೋಲುಗಳಿಂದ ಉತ್ತರ ಪ್ರದೇಶ ತಂಡವನ್ನು ಸೋಲಿಸಿತು.
ಬುಧವಾರದ ಪಂದ್ಯಗಳು: ಮಧ್ಯ ಪ್ರದೇಶ-ಪಂಜಾಬ್ (ಬೆಳಿಗ್ಗೆ 9.15) ಹಾಗೂ ಒಡಿಶಾ-ತಮಿಳುನಾಡು (ಬೆಳಿಗ್ಗೆ 10.30ಕ್ಕೆ).