ಸುರತ್ಕಲ್: `ಪ್ರೇಕ್ಷಕರ ಮತ್ತು ಕಲಾವಿದರ ಅಂತರವನ್ನು ಕಡಿಮೆಗೊಳಿಸುವ ಯಕ್ಷಗಾನ ಮನೋವಿಕಾಸಕ್ಕೆ ಕಾರಣವಾಗುತ್ತದೆ. ಅದ್ಭುತ ಚಿಂತನೆಯಿಂದ ಮೂಡಿದ ಕಲೆ ಯಕ್ಷಗಾನವಾಗಿದೆ~ ಎಂದು ಪೊಳಲಿ ಶಾಸ್ತ್ರಿ ಸ್ಮಾರಕ ಸಮಿತಿಯ ಕಾರ್ಯದರ್ಶಿ ಪೊಳಲಿ ನಿತ್ಯಾನಂದ ಕಾರಂತ ಅಭಿಪ್ರಾಯಪಟ್ಟಿದ್ದಾರೆ.
ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಮಂಡಳಿಯ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇದೇ 27ರವರೆಗೆ ಯಕ್ಷಗಾನ ತಾಳಮದ್ದಲೆ, ಬಯಲಾಟಗಳು ಕ್ಷೇತ್ರದಲ್ಲಿ ನಡೆಯಲಿದೆ.
ಯಕ್ಷಗಾನದಲ್ಲಿ ಬಡಗು ಹಾಗೂ ತೆಂಕುತಿಟ್ಟುಗಳ ಮಿಶ್ರಣ ಬೇಡವೆಂದ ಅವರು ಯಕ್ಷಗಾನದಲ್ಲಿ ಹಾಸ್ಯ ದಾರಿತಪ್ಪುತ್ತಿದೆ. ವೇಷಧಾರಿಗಳು ಪೌರಾಣಿಕ ಚೌಕಟ್ಟುಗಳನ್ನು ಮೀರುತ್ತಿದ್ದಾರೆ ಎಂದು ವಿಷಾದಿಸಿದರು.
ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಐ.ರಮಾನಂದ ಭಟ್ ಆಶೀರ್ವಚನ ನೀಡಿದರು.
ಮಂಗಳೂರು ಕೆಎಂಸಿ ವೈದ್ಯ ಡಾ.ಪದ್ಮನಾಭ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮೇಯರ್ ದೇವಣ್ಣ ಶೆಟ್ಟಿ, ಇಡ್ಯಾ ಬಿಲ್ಲವ ಸಂಘದ ಅಧ್ಯಕ್ಷ ದೊಂಬಯ್ಯ ಪೂಜಾರಿ, ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಡಾ.ಸಿ.ಸತ್ಯಮೂರ್ತಿ ಐತಾಳ್, ಕುಳಾಯಿ ಗ್ರಾಮ ಸಂಘದ ಅಧ್ಯಕ್ಷ ಕೆ.ಪಿ.ಚಂದ್ರಶೇಖರ್ ವಿಷ್ಣಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೃಷ್ಣ ಹೆಬ್ಬಾರ್, ಭಜನಾ ಮಂಡಳಿಯ ಅಧ್ಯಕ್ಷ ಪಿ.ರಾಮ ಐತಾಳ್, ಯಕ್ಷಗಾನ ಮಂಡಳಿಯ ಸಂಚಾಲಕ ವಾಸುದೇವ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.