ನವದೆಹಲಿ: ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಮೆರಿಕದೊಂದಿಗೆ ನಾಗರಿಕ ಪರಮಾಣು ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದನ್ನು ಒಪ್ಪದ ಸಿಪಿಎಂ ನೇತೃತ್ವದ ಎಡಪಕ್ಷಗಳು 2008ರ ಜುಲೈನಲ್ಲಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸು ಪಡೆದವು. ಆಗ ಸರ್ಕಾರಕ್ಕೆ ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸುವ ಅನಿವಾರ್ಯತೆ ಎದುರಾಗಿತ್ತು.
ಎಡಪಕ್ಷಗಳು ಬೆಂಬಲ ವಾಪಸು ಪಡೆಯುವುದಕ್ಕೆ ಮುನ್ನ ಯುಪಿಎ ವಿರೋಧಿಯಾಗಿದ್ದ ಸಮಾಜವಾದಿ ಪಕ್ಷ, ಆ ಹಂತದಲ್ಲಿ ಸರ್ಕಾರದ ಪರ ವಾಲಿತು. ಆಗ ಅಮರ್ ಸಿಂಗ್ ಅವರು ಆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ವಿಶ್ವಾಸಮತ ಗೊತ್ತುವಳಿಗೆ ಮುನ್ನ 2008ರ ಜುಲೈ 22ರಂದು ಸದನದಲ್ಲಿ ಬಿಸಿಬಿಸಿ ಚರ್ಚೆ ನಡೆದಿತ್ತು. ಆಗ ದಿಢೀರ್ ಎದ್ದ ಬಿಜೆಪಿಯ ಮೂವರು ಸಂಸದರಾದ ಅಶೋಕ್ ಆರ್ಗಲ್, ಫಗ್ಗನ್ ಸಿಂಗ್ ಕುಲಸ್ತೆ ಮತ್ತು ಮಹಾವೀರ ಸಿಂಗ್ ಭಗೋರ ಅವರು ತಮ್ಮ ಬಳಿ ಇದ್ದ ಬ್ಯಾಗಿನಿಂದ ನೋಟಿನ ಕಂತೆಗಳನ್ನು ಎತ್ತಿ `ವಿಶ್ವಾಸಮತ ವೇಳೆ ತಮ್ಮ ಪರ ಮತ ಹಾಕಲು (ಅಥವಾ ತಟಸ್ಥವಾಗಿರಲು ಕೋರಿ) ಸರ್ಕಾರ ತಮಗೆ ನೀಡಿರುವ ಹಣ ಇದು~ ಎಂದು ಪ್ರದರ್ಶಿಸಿದ್ದರು.