ಬೆಂಗಳೂರು: ನಗರದ ಸಾಹಿತಿ ಮತ್ತು ಕಲಾವಿದರ ವೇದಿಕೆಯು ಉತ್ತರಾಖಂಡದ ದುರಂತದ ಹಿನ್ನೆಲೆಯಲ್ಲಿ ಒಂದಿಷ್ಟು ಸಂವಾದ, ಚರ್ಚೆ, ಪ್ರಯೋಗ ಮತ್ತು ಪ್ರಸ್ತುತಿಗಳ ಮೂಲಕ ಪ್ರಕೃತಿ ಸವಾಲಿನ ರೂಪದಲ್ಲಿ ಮುಂದೊಡ್ಡಿರುವ ಯಕ್ಷ ಪ್ರಶ್ನೆಗಳಿಗೆ ಉತ್ತರ ಹುಡುಕುವ ಸಾಹಸಕ್ಕೆ ಮುಂದಡಿ ಇಟ್ಟಿದೆ.
ದುರಂತದ ಎಲ್ಲ ಆಯಾಮಗಳನ್ನು ಅವಲೋಕನ ಮಾಡಲು ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ 4ರಂದು (ಭಾನುವಾರ) `ಪ್ರಕೃತಿ ವರವೋ ಅಥವಾ ಶಾಪವೋ?' ಎಂಬ ಇಡೀ ದಿನದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಬೆಳಿಗ್ಗೆ 10ಕ್ಕೆ `ಹಿಮಾಲಯ-ಸುನಾಮಿ' ಶೀರ್ಷಿಕೆ ಅಡಿಯಲ್ಲಿ ಮಕ್ಕಳ ಚಿತ್ರ ರಚನೆ ಕಾರ್ಯಕ್ರಮ ನಡೆಯಲಿದೆ. ಅದೇ ಕಾಲಕ್ಕೆ `ಸತ್ಯ ಮತ್ತು ಮಿಥ್ಯ ಕಾರಣ ಮತ್ತು ಪರಿಹಾರ ಕುರಿತು ಚರ್ಚೆಯನ್ನು ಏರ್ಪಡಿಸಲಾಗಿದೆ. ಚಿರಂಜೀವಿ ಸಿಂಗ್ ಅಧ್ಯಕ್ಷತೆ ವಹಿಸಲಿದ್ದು, ನಾಗೇಶ ಹೆಗಡೆ, ಜಿ.ಜೆ. ಲಿಂಗರಾಜು, ಸಂಜಯ್ ಗುಬ್ಬಿ, ಪ್ರಕಾಶ ಬೆಳವಾಡಿ ಭಾಗವಹಿಸಲಿದ್ದಾರೆ.
ಬೆಳಿಗ್ಗೆ 11ಕ್ಕೆ ಕವಿಗೋಷ್ಠಿ ನಡೆಯಲಿದ್ದು, ಡಾ.ಎಚ್.ಎಸ್. ವೆಂಕಟೇಶಮೂರ್ತಿ, ಡಾ. ನಾ.ದಾಮೋದರ ಶೆಟ್ಟಿ, ಡಾ.ಬಿ.ಆರ್. ಲಕ್ಷ್ಮಣರಾವ್, ಸುಬ್ಬು ಹೊಲೆಯಾರ್, ಡಾ. ಸಿದ್ದಲಿಂಗಯ್ಯ, ವೀಣಾ ಬನ್ನಂಜೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 2.30ರಿಂದ ಅಖಿಲ ಕರ್ನಾಟಕ ಜನಪದ ಕಲಾವಿದರ ಒಕ್ಕೂಟದಿಂದ `ಎಲ್ಲವನೋ ಶಿವನೆಲ್ಲವನೋ' ಜನಪದ ಗೀತೆಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಮಧ್ಯಾಹ್ನ 3.30ಕ್ಕೆ ನೃತ್ಯಪಟುಗಳಿಂದ ಶಾಸ್ತ್ರೀಯ ಸಮೂಹ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಜೆ 4.30ಕ್ಕೆ ರಂಗಕರ್ಮಿಗಳು ರಂಗಗೀತೆ ಹಾಡಲಿದ್ದಾರೆ. 5.30ಕ್ಕೆ ಸುಗಮ ಸಂಗೀತದ ಮೂಲಕ ಖ್ಯಾತ ಗಾಯಕರು ತಮ್ಮ ಪ್ರತಿಕ್ರಿಯೆ ನೀಡಲಿದ್ದಾರೆ. 7ಕ್ಕೆ ಸಮರ್ಪಣಾ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ.