ಸೋಮವಾರಪೇಟೆ: ಜಿಲ್ಲೆಯಾದ್ಯಂತ ಕೆಲ ದಿನಗಳಿಂದ ಮುಂಗಾರು ಮಳೆ ಬಿರುಸಿನಿಂದ ಬೀಳುತ್ತಿದ್ದು, ಜಿಲ್ಲೆಯ 3 ತಾಲ್ಲೂಕುಗಳಲ್ಲಿ ಉಂಟಾಗಬಹುದಾದ ಪ್ರಕೃತಿ ವಿಕೋಪಗಳನ್ನು ತಡೆದು ಅಗತ್ಯ ಪರಿಹಾರೋಪಾಯ ಕಲ್ಪಿಸಲು ತಾಲ್ಲೂಕು ಹಾಗೂ ಜಿಲ್ಲಾಡಳಿತ ಸಜ್ಜಾಗಿದೆ ಎಂದು ಜಿಲ್ಲಾ ಉಪ ವಿಭಾಗಾಧಿಕಾರಿ ಡಾ. ಎಂ.ಆರ್.ರವಿ ಹೇಳಿದರು.
ಸುದ್ದಿಗಾರರಿಗೆ ಈ ಕುರಿತು ಈಚೆಗೆ ಮಾಹಿತಿ ನೀಡಿದ ಅವರು, ಪ್ರಕೃತಿ ವಿಕೋಪಗಳು ಸಂಭವಿಸಿದರೆ ಕೂಡಲೆ ಮಾಹಿತಿ ನೀಡಲು ಜಿಲ್ಲಾ ಕೇಂದ್ರ ಸೇರಿದಂತೆ 3 ತಾಲ್ಲೂಕು ಕೇಂದ್ರಗಳಲ್ಲಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ನಿಯಂತ್ರಣ ಕೊಠಡಿ ಯನ್ನು ತೆರೆಯಲಾಗಿದೆ ಎಂದರು.
ಅತಿ ಹೆಚ್ಚು ನೆರೆ ಹಾವಳಿಗೆ ಸಿಲುಕುವ ಪ್ರದೇಶಗಳಲ್ಲಿ ಗಂಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಲಾಗಿದೆ. ಇದಕ್ಕೆ ೀಕಾದ ಅಗತ್ಯ ವಸ್ತುಗಳು ಹಾಗೂ ಪಡಿತರಗಳನ್ನು ಸಂಗ್ರಹಿಸಿ ಇಡಲಾಗಿದೆ.
ತಾಲ್ಲೂಕಿನ ನೆಲ್ಲಿಹುದಿ ಕೇರಿ, ಗುಹ್ಯ ಸೇರಿದಂತೆ ಕರಡಿಗೋಡು, ಗೋಣಿಕೊಪ್ಪಲಿನ ಕೀರೆಹೊಳೆ ಪ್ರದೇಶ ಹಾಗೂ ಭಾಗಮಂಡಲದ ತ್ರಿವೇಣಿ ಸಂಗಮಕ್ಕೆ ಆಯಾ ತಾಲ್ಲೂಕಿನ ತಹಶೀಲ್ದಾರ್ ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಖುದ್ದಾಗಿ ತೆರಳಿ ಪರಿಶೀಲನೆ ಮಾಡ ಲಾಗಿದೆ. ಭಾಗಮಂಡಲದಲ್ಲಿ ಕಾವೇರಿ ನದಿ ನೀರಿನ ಸರಾಗ ಹರಿವಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ವಿವರಿಸಿದರು.
ಈ ಹಿಂದಿನ ವರ್ಷಗಳಲ್ಲಿ ನೆರೆ ಹಾವಳಿ ಉಂಟಾದ ಪ್ರದೇಶಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಲಾಗಿದೆ. ಈ ಬಾರಿಯೂ ನೆರೆಹಾವಳಿ ಉಂಟಾಗುವ ಸಾಧ್ಯತೆ ಇರುವ ಪ್ರದೇಶಗಳನ್ನು ಗುರುತಿಸಿ ಅಲ್ಲಿ ವಾಸಿಸುತ್ತಿರುವ ಜನರಿಗೆ ಮಳೆಗಾಲ ಮುಗಿಯುವ ತನಕ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ.
ಆಯಾ ತಾಲ್ಲೂಕು ತಹಶೀಲ್ದಾರರ ಅಡಿಯಲ್ಲಿ ಜಿಲ್ಲೆಯ 3 ತಾಲ್ಲೂಕುಗಳಲ್ಲಿನ ವಿವಿಧ ಇಲಾಖೆ ಗಳನ್ನು ಒಳಗೊಂಡ ಟಾಸ್ಕ್ಫೋರ್ಸ್ ಸಮಿತಿ ರಚಿಸಲಾಗಿದ್ದು ಇದರ ಮೂಲಕ ದೈನಂದಿನ ಮಾಹಿತಿ ಸಂಗ್ರಹಿಸುತ್ತೇವೆ ಎಂದರು.
ಮಳೆಗಾಲ ಮುಗಿಯುವ ತನಕವೂ ಸರ್ಕಾರಿ ಇಲಾಖೆ ನೌಕರರು ಅನಗತ್ಯ ರಜೆ ಹಾಕದಂತೆ ನಿರ್ದೇಶನ ನೀಡಲಾಗಿದೆ. ಬೆಳೆಹಾನಿ ಹಾಗೂ ಜಾನುವಾರುಗಳ ಪ್ರಾಣ ಹಾನಿ ಉಂಟಾದರೆ ಕಂದಾಯ ಇಲಾಖೆ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ವಾರದೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಪ್ರಾಕೃತಿಕ ವಿಕೋಪಗಳು ಸಂಭವಿಸಿ ದರೆ ಸಾರ್ವಜನಿಕರು ಕೂಡಲೆ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರದಲ್ಲಿರುವ ನಿಯಂತ್ರಣಾ ಕೊಠಡಿಗೆ ಮಾಹಿತಿ ನೀಡಬೇಕು. ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಆಡಳಿತ ವರ್ಗದೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.